ಬೆಂಗಳೂರು ನಗರದ ಪರಪ್ಪನ ಅಗ್ರಹಾರ ಸಮೀಪದ ಚೂಡಸಂದ್ರದಲ್ಲಿ ಕ್ಷುಲ್ಲಕ ವಿಚಾರಕ್ಕೆ ರೋಡ್ ರೇಜ್ ಪ್ರಕರಣ ನಡೆದಿದ್ದು, ಐವರು ಕಿಡಿಗೇಡಿಗಳು ನೀರಿನ ಟ್ಯಾಂಕರ್ ಅನ್ನು 4–5 ಕಿ.ಮೀ. ಹಿಂಬಾಲಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಮನೆಯ ಮುಂದೆ ಹಾಕಿದ್ದ ಹಲಗೆಯ ಮೇಲೆ ಟ್ಯಾಂಕರ್ ಹರಿದ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಬಳಿಕ ಆರೋಪಿಗಳು ಬೈಕ್ನಲ್ಲಿ ಟ್ಯಾಂಕರ್ ಅನ್ನು ಬೆನ್ನಟ್ಟಿ ಅಡ್ಡಗಟ್ಟಲು ಯತ್ನಿಸಿದ್ದಾರೆ. ವಾಹನ ನಿಲ್ಲಿಸದ ಹಿನ್ನೆಲೆಯಲ್ಲಿ ಟ್ಯಾಂಕರ್ನ ಮುಂಭಾಗದ ಗಾಜಿಗೆ ಕಲ್ಲು ತೂರಿದ್ದು, ಗಾಜು ಸೀಳಿ ಬಂದ ಕಲ್ಲು ಚಾಲಕ ಅಸ್ಲಿನ್ ವಿನೋ ಅವರ ಎಡಗಣ್ಣಿಗೆ ಬಿದ್ದು ಗಾಯವಾಗಿದೆ.

ಬಳಿಕ ಆರೋಪಿಗಳು ಚಾಲಕನಿಗೆ ಥಳಿಸಿದ್ದು, ಘಟನೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಾಲಕನ ಸ್ನೇಹಿತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ಘಟನೆಯ ಹಿಂದೆ ವಾಟರ್ ಮಾಫಿಯಾದ ಕೈವಾಡವಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




