ಪುತ್ತೂರು: ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯ ನಂತರ ಮಹಿಳೆ ಶ್ವೇತಾ (ಶಾಂತಕುಮಾರಿ) ಮೃತಪಟ್ಟ ಪ್ರಕರಣದಲ್ಲಿ, ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಸೇವಾ ನ್ಯೂನತೆ ಸಂಭವಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ನ್ಯಾಯಾಲಯ ತೀರ್ಪು ನೀಡಿದೆ.

ಕೆಮ್ಮಿಂಜೆ ಗ್ರಾಮದ ಮುಂಡೂರು ನಿವಾಸಿ ಗಣೇಶ್ ಬಂಗೇರ ಅವರು ತಮ್ಮ ಪತ್ನಿಯ ಮೃತ್ಯುವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೆಂದು 2014ರಲ್ಲಿ ದೂರು ಸಲ್ಲಿಸಿದ್ದರು. ಈ ಮೊದಲು ಪ್ರಕರಣವನ್ನು ವಜಾ ಮಾಡಿದ ನ್ಯಾಯಾಲಯ, ಮರು ವಿಚಾರಣೆ ಬಳಿಕ ಇದೀಗ ದೂರುದಾರರಿಗೆ ಜಯ ನೀಡಿದೆ.

ದೂರುದಾರರಿಗೆ ವೈದ್ಯರು ಮತ್ತು ಆಸ್ಪತ್ರೆ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದೆಯಲ್ಲದೇ ವ್ಯಾಜ್ಯ ವೆಚ್ಚವಾಗಿ 30,000 ರೂ. ನೀಡುವಂತೆ ಆದೇಶ ನೀಡಿದೆ.
10 ಲಕ್ಷ ರೂ. ಜತೆಗೆ ಶೇ. 6 ಬಡ್ಡಿಯನ್ನು ಪ್ರಕರಣ ದಾಖಲಾತಿ ಸಮಯದಿಂದ ವಸೂಲಾಗುವವರೆಗೆ ನೀಡಬೇಕೆಂದು, 45 ದಿನಗಳ ಒಳಗಾಗಿ ಪರಿಹಾರ ನೀಡದಿದ್ದರೆ ಶೇ. 8 ಬಡ್ಡಿಯಂತೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ವಸೂಲಾತಿಗಾಗಿ ಸೂಕ್ತ ಕ್ರಿಮಿನಲ್ ಅಥವಾ ಸಿವಿಲ್ ವ್ಯವಹರಣೆಗಳನ್ನು ಆರಂಭಿಸಬಹುದು ಎಂದು ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.


