ಬ್ರಹ್ಮಾವರ: ಗ್ರಾಮ ಗಸ್ತು ಕರ್ತವ್ಯದಲ್ಲಿದ್ದ ಬೀಟ್ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ರೌಡಿ ಶೀಟರ್ ಒಬ್ಬನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಹಂದಾಡಿ ಗ್ರಾಮದ ಬೇಳೂರು ಜೆಡ್ಡು ನಿವಾಸಿ ನಿಖಿಲ್ ಎಂದು ಗುರುತಿಸಲಾಗಿದೆ.
ಜುಲೈ 13ರಂದು ಹಂದಾಡಿ–ಮಟಪಾಡಿ ವ್ಯಾಪ್ತಿಯಲ್ಲಿ ಗ್ರಾಮ ಗಸ್ತು ಕರ್ತವ್ಯದಲ್ಲಿದ್ದ ಬ್ರಹ್ಮಾವರ ಠಾಣೆಯ ಕಾನ್ಸ್ಟೇಬಲ್ ಕಿಶನ್ ಅವರು, ಪೊಲೀಸ್ ಉಪನಿರೀಕ್ಷಕರ ಸೂಚನೆಯಂತೆ ಸಂಜೆ 7 ಗಂಟೆ ಸುಮಾರಿಗೆ ರೌಡಿ ಶೀಟರ್ ನಿಖಿಲ್ನನ್ನು ಪರಿಶೀಲಿಸಲು ಆತನ ಮನೆಗೆ ತೆರಳಿದ್ದರು. ನಿಖಿಲ್ ಮನೆಯಲ್ಲಿ ಇಲ್ಲದ ಕಾರಣ ಮೊಬೈಲ್ ಮೂಲಕ ಸಂಪರ್ಕಿಸಿ ಆತನಿರುವ ಸ್ಥಳದ ಬಗ್ಗೆ ವಿಚಾರಿಸಿದ್ದಾರೆ.

ಈ ವೇಳೆ ಆರೋಪಿ, “ನಾನು ಎಲ್ಲಿದ್ದರೆ ನಿನಗೇನು? ನನ್ನ ಮನೆಗೆ ಯಾಕೆ ಬಂದಿದ್ದೀ? ಅಲ್ಲೇ ಇರು, ಬಂದು ನಿನ್ನನ್ನು ಕೊಂದು ಹಾಕುತ್ತೇನೆ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ರಾತ್ರಿ ಸುಮಾರು 8.30ಕ್ಕೆ ನಿಖಿಲ್ ಮತ್ತೆ ಕಾನ್ಸ್ಟೇಬಲ್ಗೆ ಪದೇಪದೆ ಕರೆ ಮಾಡಿ, “ನೀನು ಯಾಕೆ ನನ್ನ ಮನೆ ಹತ್ತಿರ ಬಂದಿದ್ದು? ನೀನು ಬಚ್ಚಾ ಬೀಟ್ ಪೊಲೀಸ್, ಈಗ ಬಾ” ಎಂದು ನಿಂದಿಸಿ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಜೀವ ಬೆದರಿಕೆ ಹಾಕಿದ ಆರೋಪದಡಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 132, 351(2) ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಆರೋಪಿ ನಿಖಿಲ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನಿಖಿಲ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಒಂದು ಸುಲಿಗೆ ಪ್ರಕರಣ ಹಾಗೂ ಒಂದು ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದ್ದು, ಆತ ರೌಡಿ ಶೀಟರ್ ಆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


