Breaking
16 Jul 2026, Thu

ಶಕ್ತಿನಗರ: ಮುಸ್ತಾಕ್ ಸಾವು ಪ್ರಕರಣ: ಕಳ್ಳತನ ಯತ್ನ ಆರೋಪದಡಿ ಜೊತೆಗಿದ್ದ ವ್ಯಕ್ತಿ ಬಂಧನ

ಬೆಳ್ತಂಗಡಿ: ಕುವೆಟ್ಟು ಗ್ರಾಮದ ಶಕ್ತಿನಗರದ ಎಸ್‌ಎಲ್‌ವಿಇ ಪವರ್ ಪ್ರೈವೇಟ್ ಲಿಮಿಟೆಡ್ ರಿಸೀವಿಂಗ್ ಸ್ಟೇಷನ್ ಸಮೀಪ ಜುಲೈ 1ರಂದು ನಡೆದ ಮುಸ್ತಾಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆತನ ಜೊತೆಗಿದ್ದ ವ್ಯಕ್ತಿಯನ್ನು ಬೆಳ್ತಂಗಡಿ ಪೊಲೀಸರು ಜುಲೈ 16ರಂದು ಬಂಧಿಸಿದ್ದಾರೆ.

ಬಂಧಿತನನ್ನು ಕಾಶಿಪಟ್ಣ ನಿವಾಸಿ ಇಬ್ರಾಹಿಂ ಲತೀಫ್ (36) ಎಂದು ಗುರುತಿಸಲಾಗಿದೆ.

ಪೊಲೀಸರ ತನಿಖೆಯ ಪ್ರಕಾರ, ಮುಸ್ತಾಕ್ ಮತ್ತು ಇಬ್ರಾಹಿಂ ಲತೀಫ್ ಇಬ್ಬರೂ ರಿಸೀವಿಂಗ್ ಸಬ್ ಸ್ಟೇಷನ್ ಸಮೀಪ ಕಳ್ಳತನದ ಉದ್ದೇಶದಿಂದ ತೆರಳಿದ್ದು, ಈ ವೇಳೆ ಮುಸ್ತಾಕ್ ಕುತ್ತಿಗೆಗೆ ತಂತಿ ಸಿಲುಕಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಇಬ್ಬರೂ ಸೇರಿ ಕಳ್ಳತನಕ್ಕೆ ಯತ್ನಿಸಿದ್ದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ಲಭಿಸಿದ ಹಿನ್ನೆಲೆಯಲ್ಲಿ ಇಬ್ರಾಹಿಂ ಲತೀಫ್‌ನನ್ನು ಬಂಧಿಸಲಾಗಿದೆ.

ಪ್ರಕರಣದ ತನಿಖೆ ವೇಳೆ ಮೃತದೇಹ ಪತ್ತೆಯಾದ ಸ್ಥಳದ ಸಮೀಪ ರಿಸೀವಿಂಗ್ ಸ್ಟೇಷನ್ ಆವರಣದಲ್ಲಿ ಉಪಯೋಗಿಸಿ ಉಳಿದ ಹಳೆಯ ಅಲ್ಯೂಮಿನಿಯಂ ತಂತಿಯ ತುಂಡುಗಳು ಪತ್ತೆಯಾಗಿದ್ದವು. ಇದರಿಂದ ಅನುಮಾನಗೊಂಡ ಸಂಸ್ಥೆಯ ವ್ಯವಸ್ಥಾಪಕರು ಪರಿಶೀಲನೆ ನಡೆಸಿದಾಗ, ಆವರಣದಲ್ಲಿ ಸಂಗ್ರಹಿಸಿದ್ದ ಹಳೆಯ ಅಲ್ಯೂಮಿನಿಯಂ ವಯರ್ ಬಂಡಲ್‌ಗಳು ಹಾಗೂ ಇತರ ಸಾಮಗ್ರಿಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *