ಕಡಬ: ವಿದ್ಯುತ್ ಆಘಾತಕ್ಕೆ ಒಳಗಾಗಿ ಮಹಿಳೆ ಮೃತಪಟ್ಟಿರುವ ಘಟನೆ ತಾಲೂಕಿನ ದೋತ್ಪಾಡಿ ಗ್ರಾಮದ ಕೂರೇಲು ಎಂಬಲ್ಲಿ ಜೂ. 16ರಂದು ನಡೆದಿದೆ.
ಮೃತಪಟ್ಟ ಮಹಿಳೆ ಸ್ಥಳೀಯ ನಿವಾಸಿ ಪುರಂದರ ಅವರ ಪತ್ನಿ ಜಲಜಾಕ್ಷಿ (38) ಎಂದು ಗುರುತಿಸಲಾಗಿದೆ.

ಜಲಜಾಕ್ಷಿ ಅವರು ತಮ್ಮ ತೋಟದಲ್ಲಿರುವ ಕೃಷಿ ಪಂಪು ಚಾಲನೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಅವರನ್ನು ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಅಷ್ಟರಲ್ಲೇ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಮೆಸ್ಕಾಂ ಸವಣೂರು ಶಾಖಾ ಕಚೇರಿಯ ಶಾಖಾಧಿಕಾರಿ ರಾಜೇಶ್, ಚಾರ್ವಾಕ ಸಿ.ಎ. ಬ್ಯಾಂಕ್ ಅಧ್ಯಕ್ಷ ಗಣೇಶ್ ಉದನಡ್ಕ, ಕಾಣಿಯೂರು ಗ್ರಾ.ಪಂ. ಪಿಡಿಒ ರಘು ಬಿ.ಎನ್., ಸದಸ್ಯರಾದ ಲೋಕಯ್ಯ ಪರವ, ದೇವಿಪ್ರಸಾದ್, ಅಂಬಾಕ್ಷಿ, ತಾರಾನಾಥ ಭೇಟಿ ನೀಡಿದರು.
ಈ ಕುರಿತು ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಮಹಿಳೆ ಪತಿ ಹಾಗೂ ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.


