Breaking
4 Feb 2026, Wed

ಮೇ 17ರಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕಾರಿಣಿ ಸಭೆ: ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯಕಾರಿಣಿ ಸಭೆಯು ಮೇ.17ರಂದು ಪುತ್ತೂರಿನ ಎಪಿಎಂಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ಈ ಕಾರ್ಯಾಕಾರಿಣಿಯು ಕಾಂಗ್ರೆಸ್ ಪಕ್ಷದಲ್ಲೇ ಪುತ್ತೂರಿನಲ್ಲಿ ಪ್ರಥಮ ಪ್ರಯೋಗವಾಗಿ ಮೂಡಿ ಬರಲಿದೆ. ಸಮಾವೇಶಕ್ಕೆ ಈಗಾಗಲೇ ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆಸಲಾಗಿದೆ. ಕಾರ್ಯಾಗಾರವು 4 ವಿಭಾಗದಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 10ಕ್ಕೆ ವಲಯ ಮತ್ತು ಬೂತ್ ಅಧ್ಯಕ್ಷರುಗಳಿಗೆ, 12 ಗಂಟೆಯಿಂದ ಮಧ್ಯಾಹ್ನ ಗಂಟೆ 2ರ ತನಕ ಸರಕಾರದ ಹಂತದಲ್ಲಿ ನಾಮನಿರ್ದೇಶಿತ ಮತ್ತು ನೇಮಕಗೊಂಡ ಸದಸ್ಯರಿಗೆ, 3 ಗಂಟೆಯಿಂದ ಸಂಜೆ ಗಂಟೆ 4ರ ತನಕ ಪಕ್ಷದ ಪ್ರಮುಖ ನಾಯಕರಿಗೆ ಕಾರ್ಯಾಗಾರ ನಡೆಯಲಿದೆ.

ಸಂಜೆ ಗಂಟೆ 5 ರಿಂದ ರಾತ್ರಿ ಗಂಟೆ 9ರ ತನಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಕುಟುಂಬ ಸಮ್ಮಿಲನ ನಡೆಯಲಿದೆ. ಪಕ್ಷದ ಎಲ್ಲಾ ಕಾರ್ಯಕರ್ತರು ಅವರ ಮನೆ ಮಂದಿಯೊಂದಿಗೆ ಭಾಗವಹಿಸಲಿದ್ದಾರೆ. ಈ ಸಮಯದಲ್ಲಿ ಸುಮಾರು ಒಂದೂವರೆ ಗಂಟೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೇ ಹಾಡನ್ನು ಹಾಡಲಿದ್ದಾರೆ ಎಂದವರು ಹೇಳಿದರು. ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಕಾಂಗ್ರೆಸ್ ಪಕ್ಷದ ವರ್ಕಿಂಗ್ ಪ್ರಸಿಡೆಂಟ್ ಕೆ.ಸಿ ಚಂದ್ರಶೇಖರ್, ದ.ಕ ಜಿಲ್ಲಾ ಉಸ್ತುವಾರಿ ಮಂತ್ರಿ ದಿನೇಶ್ ಗುಂಡೂರಾವ್, ವಿಧಾನಸಭಾಪತಿ ಅಧ್ಯಕ್ಷ ಯು.ಟಿ.ಖಾದರ್, ಮಂಜುನಾಥ್ ಭಂಡಾರಿ, ಹರೀಶ್ ಕುಮಾರ್, ಐವನ್ ಡಿಸೋಜ, ಮಾಜಿ ಮಂತ್ರಿ ರಮಾನಾಥ ರೈ, ಅಭಯಚಂದ್ರ ಜೈನ್ ಸಹಿತ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿರುವ ಪ್ರತಿನಿಧಿಗಳು, ವಿಧಾನಸಭಾ ಕ್ಷೇತ್ರದ ಪ್ರಮುಖರು, ಬ್ಲಾಕ್ ಅಧ್ಯಕ್ಷರುಗಳು ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ. ನಾಲ್ಕು ವಿಭಾಗದ ಅವಧಿಯನ್ನು ಬೆಂಗಳೂರಿನಿಂದ ಬರುವ ಪರಿಣಿತರು ಮಾಡಲಿದ್ದಾರೆ. ಸಂಜೆ ಕುಟುಂಬ ಸಮ್ಮಿಲನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಾಗಾರವು ತಳಮಟ್ಟದಲ್ಲಿ ಪಕ್ಷದ ಕೆಲಸದ ಕುರಿತು ನಡೆಯಲಿದೆ. ಸರಕಾರದ 5 ಗ್ಯಾರೆಂಟಿ, ಬೇರೆ ಬೇರೆ ಯೋಜನೆ ತಳಮಟ್ಟದಲ್ಲಿ ಬಡವರಿಗೆ ತಲುಪಬೇಕು. ಕಾರ್ಯಕರ್ತರು ಮನೆ ಮನೆಗೆ ಹೋಗಿ ಹೇಗೆ ಕೆಲಸ ಮಾಡಬೇಕು. ಪಕ್ಷಾತೀತವಾಗಿ ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ, ಬಿಜೆಪಿ ಪಕ್ಷದವರ ಸಹಿತ ಎಲ್ಲರ ಕೆಲಸವನ್ನು ಮಾಡಬೇಕು. ಇದರಲ್ಲಿ ಯಾವುದೇ ರೀತಿಯ ರಾಜಕೀಯ ಭಾಷಣವಿಲ್ಲ. ಜನರೊಂದಿಗೆ ಕಾರ್ಯಕರ್ತರು ಯಾವ ರೀತಿ ಬೆರೆಯಬೇಕೆಂಬುದು ಮಾತ್ರ ಇದರಲ್ಲಿ ಹೇಳಿಕೊಡಲಾಗುತ್ತದೆ.

ಆ ಮೂಲಕ ಪಕ್ಷದ ಯೋಜನೆ, ಶಾಸಕರ ಯೋಜನೆ, ಕಲ್ಪಣೆಯನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಪುತ್ತೂರಿನಲ್ಲಿ ನಿವೇಶನ ಹಂಚಿಕೆಗೆ ಸುಮಾರು 300 ಎಕ್ರೆ ಜಾಗವನ್ನು ಗುರುತಿಸಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರು ಕೂಡಾ ವಿದ್ಯುತ್ ಸಂಪರ್ಕ,ನೀರಿನ ಸಂಪರ್ಕ ಮನೆ ಇಲ್ಲದೆ ಇರಬಾರದು ಇದು ನಮ್ಮ ಕನಸು. ಇದಕ್ಕೆ ಪೂರಕವಾಗಿ ಕೆಲಸ ಮಾಡಲು ಈ ಕಾರ್ಯಾಗಾರ ನಡೆಯಲಿದೆ. ಅಕ್ರಮ ಸಕ್ರಮ, 94 ಸಿ, 94ಸಿಸಿ ಬಡವರಿಗೆ ಮಾಡಿಕೊಡುವುದು, ಅವರಿಗೆ ಅರಿವು ಮೂಡಿಸುವುದು ಕೆಲಸ ಮಾಡಬೇಕು.

ಇವತ್ತು ಪಕ್ಷದ ಕಾರ್ಯಕರ್ತರು ಚುನಾವಣಾ ಸಂದರ್ಭ ಮನೆಗೆ ಚೀಟಿ ಕೊಡುವುದು ಮಾತ್ರವಲ್ಲ ಜನರಿಗೆ ಯಾವ ರೀತಿ ಸ್ಪಂಧನೆ ಕೊಡಬಹುದು ಎಂಬ ಮಾಹಿತಿ ಇಲ್ಲ. ಅವರ ಬೂತ್ನಲ್ಲಿ ಯಾವ ಕಾಮಗಾರಿ ಪೆಂಡಿಂಗ್ ಇದೆಯೋ ಎಂದು ನೋಡಿ ಪರಿಹಾರ ಕೊಡುವ ಕೆಲಸ ಮಾಡಬೇಕಾಗಿದೆ. ಒಟ್ಟು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸ್ಪಂದನೆ ಯಾವ ರೀತಿ ಇರಬೇಕೆಂಬ ನಿಟ್ಟಿನಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಶಾಸಕರು ಹೇಳಿದರು.

ಒಟ್ಟು ಬೆಳಗ್ಗಿನಿಂದ ಸಂಜೆಯ ತನಕ ಸುಮಾರು 6 ಸಾವಿರ ಮಂದಿ ಭಾಗವಹಿಸಲಿದ್ದು, ಒಂದೊಂದು ಅವಧಿಯಲ್ಲಿ 1400 ಮಂದಿ ಭಾಗವಹಿಸಲಿದ್ದಾರೆ. ಕಾರ್ಯಾಗಾರದಲ್ಲಿ ಆಹ್ವಾನಿತರಿಗೆ ಮಾತ್ರ ಅವಕಾಶವಿದೆ. ಸಂಜೆಯ ಕಾರ್ಯಾಗಾರದಲ್ಲಿ ಕುಟುಂಬ ಸಮೇತ ಅವರು ಬರಲಿದ್ದಾರೆ. ಅವರಿಗೆ ಸುಮಾರು ರೂ. 1500 ಮೌಲ್ಯದ ಗಿಫ್ಟ್ ಕೊಡಲಿದ್ದೇವೆ. ಸುಮಾರು 40ಲಕ್ಷ ಖರ್ಚು ತಗುಲಲಿದೆ ಎಂದು ಶಾಸಕರು ಹೇಳಿದರು.

ಈ ಕಾರ್ಯಾಕಾರಿಣಿಯು ಕಾಂಗ್ರೆಸ್ ಪಕ್ಷದಲ್ಲೇ ಪುತ್ತೂರಿನಲ್ಲಿ ಪ್ರಥಮ ಪ್ರಯೋಗವಾಗಿ ಮೂಡಿ ಬರಲಿದೆ. ಎಷ್ಟೋ ಒಳ್ಳೆಯ ಕೆಲಸ, ಯೋಜನೆ ತಂದರೂ ಅದನ್ನು ತಳಮಟ್ಟಕ್ಕೆ ತಲುಪಿಸಲು ನಮ್ಮ ಕಾರ್ಯಕರ್ತರಿಗೆ ಅನುಭವದ ಕೊರತೆ ಇದೆ. ಯಾಕೆಂದರೆ ಅವರಿಗೆ ಮಾಹಿತಿ ಸರಿಯಾಗಿ ತಲುಪಿಲ್ಲ. ಈ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರ ಮಾಡಲಾಗುತ್ತಿದೆ. ಶಾಸಕರಿಗೆ ಅನುದಾನ ಬಂದಾಗ ಗೊತ್ತಿರುವ ಕಾರ್ಯಕರ್ತ ಅದನ್ನು ಅವರ ಬೂತ್ ಗೆ ತೆಗೆದುಕೊಂಡು ಹೋಗುತ್ತಾನೆ.

ಕೆಲವರಿಗೆ ಅನುದಾನವನ್ನು ಹೇಗೆ ಪಡೆಯಬೇಕೆಂದು ಗೊತ್ತಿಲ್ಲ. ಹಾಗಾಗಿ ಸರಕಾರದಿಂದ ಹೇಗೆ ಅನುದಾನ ಬರುತ್ತದೆ. ಅದನ್ನು ಹೇಗೆ ಬೂತ್ ಮಟ್ಟಕ್ಕೆ ತಲುಪಿಸಬಹುದು ಎಂಬುದು ಮುಖ್ಯ. ಈ ರೀತಿಯಲ್ಲಿ ತಳಮಟ್ಟಕ್ಕೆ ಅನುದಾನ ತಲುಪಬೇಕು. ಬಡವರ ಕಷ್ಟಕ್ಕೆ ಸ್ಪಂಧಿಸಿದಾಗ ಜನರು ನಮಗೆ ಸಹಕಾರ ನೀಡುತ್ತಾರೆ. ಮುಂದಿನ ದಿನ ಎಲ್ಲಾ ಕಾರ್ಯಕರ್ತರಿಗೆ ಕಾರ್ಯಗಾರ ನಡೆಸಲಾಗುತ್ತದೆ. ಆ ಬಳಿಕ ಬಿಎಲ್ಒಗಳಿತೆ ತರಬೇತಿ ನಡೆಯಲಿದೆ.

ಒಟ್ಟು ಸಂಬಂಧ, ಪ್ರೀತಿ ವಿಶ್ವಾಸವನ್ನು ತಳಮಟ್ಟದಲ್ಲಿ ಬೆಳೆಸುವ ಚಿಂತನೆ, ಸರಕಾರದ ಯೋಜನೆ ಮನೆ ಮನೆಗೆ ತಲುಪಬೇಕು. ಪಕ್ಷದ ಅನುಮತಿ ಕೇಳಿ ನಮ್ಮ ಚಿಂತನೆಯಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಪ್ರಥಮವಾಗಿ ಇದನ್ನು ಪುತ್ತೂರಿನಲ್ಲಿ ಮಾಡುತ್ತಿದ್ದು, ಮುಂದಿನ ದಿವಸ ಬೇರೆ ಬೇರೆ ಕಡೆಗಳಲ್ಲಿ ಈ ಕಾರ್ಯಗಾರ ನಡೆಯಲಿದೆ ಎಂದು ಶಾಸಕರು ಹೇಳಿದರು. ನಮ್ಮಲ್ಲಿ ಅನೇಕ ಬಡವರು ವಿವಿಧ ಬೇಡಿಕೆಯನ್ನು ಮುಂದಿಟ್ಟು ಬರುತ್ತಾರೆ. ಸುಮಾರು 600 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಮಾಡಿಸಿದ್ದೇವೆ. 300 ಎಕ್ರೆ ಜಮೀನು ಖಾದಿರಿಸಿದ್ದೇವೆ. 94 ಸಿ, ಸಿಸಿ ಹೇಗೆ ಪಡೆಯಬೇಕೆಂದು ಬಡವರಿಗೆ ಇನ್ನೂ ಗೊತ್ತಿಲ್ಲ.

ಶ್ರೀಮಂತರು ಎಲ್ಲವನ್ನು ಮಾಡಿಕೊಳ್ಳುತ್ತಾರೆ. ತಳಮಟ್ಟದಲ್ಲಿರುವ ವ್ಯಕ್ತಿಯನ್ನು ತಲುಪುವ ಪರಿಕಲ್ಪಣೆ ನಮ್ಮದು ಎಂದು ಶಾಸಕರು ಮಾಹಿತಿ ನೀಡಿದರು

Leave a Reply

Your email address will not be published. Required fields are marked *