ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಧ್ಯಪ್ರದೇಶದ ಕಾರ್ಮಿಕನೋರ್ವ ಶಿರಾಡಿ ಘಾಟ್ ನಲ್ಲಿ ನಾಪತ್ತೆಯಾದ ಘಟನೆ ನಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪುತ್ತೂರಿನ ಸಂಸ್ಥೆಯೊಂದರಲ್ಲಿ ದುಡಿಯಲು ಹೊಸದಾಗಿ ಸೇರ್ಪಡೆಗೊಂಡಿದ್ದ ಶ್ರೀಪಾಲ್ ನರ್ರೆ (37) ಎಂಬಾತ ಸರಕಾರಿ ಬಸ್ಸಿನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ಶಿರಾಡಿ ಘಾಟ್ ಪ್ರವೇಶಿಸುತ್ತಿದ್ದಂತೆಯೇ ತನಗೆ ಬಸ್ಸಿನಿಂದ ಇಳಿಯಬೇಕೆಂದು ವಿನಂತಿಸಿದ್ದ.
ಮೂತ್ರ ವಿಸರ್ಜನೆಯ ಕಾರಣಕ್ಕೆ ಈತ ವಿನಂತಿಸುತ್ತಿದ್ದಾನೆಂದು ಭಾವಿಸಿದ ಬಸ್ಸಿನ ನಿರ್ವಾಹಕ ಚಾಲಕನಿಗೆ ತಿಳಿಸಿ ಬಸ್ಸನ್ನು ನಿಲ್ಲಿಸಿದ್ದು, ಬಳಿಕ ಆತ ಬಸ್ಸಿನಿಂದ ಇಳಿದಿದ್ದಾನೆ.

ಆದರೆ ಹೆದ್ದಾರಿಯಲ್ಲಿ ಹಿಂದಕ್ಕೆ ಓಡಿ ಕಣ್ಮರೆಯಾದ ಅವನು ಒಂದಷ್ಟು ಹೊತ್ತು ಬಸ್ಸಿನವರು ಕಾದರು ಹಿಂದಿರುಗಲೇ ಇಲ್ಲ. ಬಳಿಕ ಬಸ್ಸನ್ನು ಚಲಾಯಿಸಿಕೊಂಡು ಬಂದ ಚಾಲಕ, ನಿರ್ವಾಹಕರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.


