ಮಾಣಿ: ಯುವವಾಹಿನಿ (ರಿ.) ಮಾಣಿ ಘಟಕದ ಮಹತ್ವಾಕಾಂಕ್ಷೆಯ “ಯುವ ಸೇವಾ ಸ್ಪರ್ಶ” ಯೋಜನೆಯ ಮೂರನೇ ಹಂತದ ಸೇವಾ ಕಾರ್ಯದ ಅಂಗವಾಗಿ, ಪೆರಾಜೆ ಗ್ರಾಮದ ನಿವಾಸಿ ಶ್ರೀಮತಿ ಪದ್ಮಾವತಿ ಅವರಿಗೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳ ಕಿಟ್ನ್ನು ವಿತರಿಸಲಾಯಿತು.

ಪದ್ಮಾವತಿ ಅವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದು, ಅನಾರೋಗ್ಯದ ಕಾರಣ ದುಡಿದು ಜೀವನ ನಿರ್ವಹಿಸಲು ಅಸಮರ್ಥರಾಗಿದ್ದಾರೆ. ಅವರ ಸಂಕಷ್ಟವನ್ನು, ವಿಶೇಷವಾಗಿ ಮಳೆಯ ಈ ಸಂದರ್ಭದಲ್ಲಿ ಮನಗಂಡ ಯುವವಾಹಿನಿ (ರಿ.) ಮಾಣಿ ಘಟಕವು ಮಾನವೀಯ ಕಳಕಳಿಯಿಂದ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಕಿಟ್ನ್ನು ವಿತರಿಸಿ ನೆರವಿನ ಹಸ್ತ ಚಾಚಿತು.

ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ, ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಮಾಜಿ ಅಧ್ಯಕ್ಷರು ಹರೀಶ್ ಬಾಕಿಲ, ಸಮಾಜ ಸೇವಾ ನಿರ್ದೇಶಕ ಸುರೇಶ್ ಬಾಕಿಲ, ಸದಸ್ಯರಾದ ಮೋಹನ ಮು ಜಲ ಗೀತಾ ಚಂದ್ರಶೇಖರ, ಸುಜಾತಾ ಸುರೇಶ್, ಅಮಿತಾ ಪೆರ್ನೆ ಹಾಗೂ ರತಿ ಯವರು ಉಪಸ್ಥಿತರಿದ್ದು, ಪದ್ಮಾವತಿ ಅವರಿಗೆ ಆಹಾರ ಕಿಟ್ನ್ನು ಹಸ್ತಾಂತರಿಸಿ ಯೋಗಕ್ಷೇಮ ವಿಚಾರಿಸಿದರು.

ಯುವವಾಹಿನಿ (ರಿ.) ಮಾಣಿ ಘಟಕವು ಸಮಾಜದ ನೊಂದ, ನಿರ್ಗತಿಕ ಹಾಗೂ ಅಗತ್ಯವಿರುವ ಕುಟುಂಬಗಳ ನೆರವಿಗೆ ಸದಾ ಸ್ಪಂದಿಸುತ್ತಿದ್ದು, “ಯುವ ಸೇವಾ ಸ್ಪರ್ಶ” ಯೋಜನೆಯ ಮೂಲಕ ಇಂತಹ ಸೇವಾ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸುವುದಾಗಿ ಅಧ್ಯಕ್ಷರು ತಿಳಿಸಿದರು


