Breaking
19 Sep 2026, Sat

ಭೇದಭಾವದ ಬೇರುಗಳನ್ನು ಕಿತ್ತೊಗೆದು ಸಮಾನತೆಯ ಸಮಾಜ ಕಟ್ಟಿದ ನಾರಾಯಣ ಗುರು: ಸಚಿನ್ ಅಮೀನ್ ಪೆರಾಜೆ

ಮಾಣಿ: ಮೇಲು-ಕೀಳು ಭೇದಭಾವ ಹಾಗೂ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿ, ಸಮಾನತೆ, ಶಿಕ್ಷಣ ಮತ್ತು ಸಂಘಟನೆಯ ಮೂಲಕ ಸಮಾಜವನ್ನು ಮುನ್ನಡೆಸಿದ ಮಹಾನ್ ಚಿಂತಕ ಬ್ರಹ್ಮಶ್ರೀ ನಾರಾಯಣ ಗುರು ಎಂದು ಸಚಿನ್ ಅಮೀನ್ ಪೆರಾಜೆ ಹೇಳಿದರು.

ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ ಮನೆ ಮನೆಗೆ ಗುರುತತ್ತ್ವ ಸಂದೇಶ ಕಾರ್ಯಕ್ರಮದ ಅಂಗವಾಗಿ ಸೆ.17ರಂದು ಮೋಹನ ಪೂಜಾರಿ ಮುಜಲ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ಕಾಲದ ಕೇರಳದಲ್ಲಿ ನೆಲೆಸಿದ್ದ ಮೇಲು-ಕೀಳು ಭೇದಭಾವ ಹಾಗೂ ಅನಿಷ್ಟ ಪದ್ಧತಿಗಳಿಂದ ಸಮಾಜದಲ್ಲಿ ಅಸಮಾನತೆ ತಾಂಡವವಾಡುತ್ತಿತ್ತು. ಇಂತಹ ಸಾಮಾಜಿಕ ಅನಿಷ್ಟಗಳನ್ನು ತೊಡೆದುಹಾಕಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರುಗಳು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮವು ಭಕ್ತಿ ಭಾವದೊಂದಿಗೆ ಭಜನಾ ಸಂಕೀರ್ತನೆಯ ಮೂಲಕ ಆರಂಭಗೊಂಡಿತು. ಜನಾರ್ದನ ಪೂಜಾರಿ ಕೊಡಂಗೆ, ಬಾಲಕೃಷ್ಣ ಪೂಜಾರಿ ಶೇರ, ಯಶೋಧರ, ಸುಜಿತ್ ಬಾಕಿಲ ಹಾಗೂ ಲೋಕೇಶ್ ಭಜನಾ ಸೇವೆ ಸಲ್ಲಿಸಿದರು. ಮೋಹನ ಪೂಜಾರಿ ಮುಜಲ ಅವರ ಕುಟುಂಬದವರ ಸಹಕಾರ ಹಾಗೂ ಆತ್ಮೀಯ ಆತಿಥ್ಯ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಣೇಶ್ ಪೂಜಾರಿ ಸ್ವಾಗತಿಸಿದರು. ಶ್ರೀಧರ ಪೂಜಾರಿ ಮುಜಲ ವಂದಿಸಿದರು. ಡಾ. ತ್ರಿವೇಣಿ ರಮೇಶ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಪೂಜಾರಿ ಮುಜಲ, ದೇರಣ್ಣ ಪೂಜಾರಿ, ಕೃಷ್ಣಪ್ಪ ಪೂಜಾರಿ ಮುಜಲ, ಸುರೇಶ್ ಪೂಜಾರಿ ಬಾಕಿಲ, ವಿಶ್ವನಾಥ ಪೂಜಾರಿ, ಗಂಗಾಧರ ಪೂಜಾರಿ ಮುಜಾಲ, ಬಾಲಕೃಷ್ಣ ಪೂಜಾರಿ ಮುಜಲ ಸೇರಿದಂತೆ ನಿರ್ದೇಶಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *