ಸುಳ್ಯ: ಚೆಂಬು ಅರಣ್ಯ ವ್ಯಾಪ್ತಿಯಲ್ಲಿ ಕಾಡುಹಂದಿಯನ್ನು ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪದಡಿ ಅರಣ್ಯ ಇಲಾಖೆ ಇಬ್ಬರನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಬಂಧಿತರನ್ನು ಚೆಂಬುವಿನ ಗೌತಮ್ ಹಾಗೂ ಪೆರಾಜೆಯ ಶರತ್ ಎಂದು ಗುರುತಿಸಲಾಗಿದೆ. ಕಾಡುಪಂಜದ ಯತಿನ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
ಅರಣ್ಯ ಅಧಿಕಾರಿಗಳ ಮಾಹಿತಿ ಪ್ರಕಾರ, ಆರೋಪಿಗಳು ಬಂದೂಕಿನಿಂದ ಕಾಡುಹಂದಿಯನ್ನು ಬೇಟೆಯಾಡಿ, ಮಾಂಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ಮಾರುತಿ ಇಕೊ ಕಾರಿನಲ್ಲಿ ಸಾಗಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಲ್ಲುಗುಂಡಿ ಸಮೀಪ ವಾಹನ ತಡೆದು ಪರಿಶೀಲನೆ ನಡೆಸಿದ ಅಧಿಕಾರಿಗಳು ಕಾಡುಹಂದಿ ಮಾಂಸ, ಬೇಟೆಗೆ ಬಳಸಿದ ಬಂದೂಕು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೆಂಥಿಲ್ ಕುಮಾರ್ (ಐಎಫ್ಎಸ್) ಹಾಗೂ ವಲಯ ಅರಣ್ಯಾಧಿಕಾರಿ ಡಿನ್ಸಿ ದೇಚಮ್ಮ, ಉಪ ವಲಯ ಅರಣ್ಯ ಅಧಿಕಾರಿ ಶ್ರೀ ರಕ್ಷಾ, ಸುರೇಶ್, ಸಂದೀಪ್ ಗೌಡ, ವಿಜೇಂದ್ರ ಕುಮಾರ್, ವಿನಯ್ ಕೃಷ್ಣ ಮತ್ತು ಅರಣ್ಯ ರಕ್ಷಕರಾದ ಯಮನೂರಿ ಕೋಳೂರು, ಕಾರ್ತಿಕ್ ಡಿ., ಸಿದ್ದೇಶ್, ನಾಗರಾಜ್ ಎಸ್., ಸಿದ್ರಾಮ್ ನಾಟಿಕಾರ್, ಶ್ರೀಕಾಂತ್ ಬಿರುದಾರ್ ಮತ್ತು ಸಂಪಾಜೆ ವ್ಯಾಪ್ತಿಯ ಇತರ ಸಿಬ್ಬಂದಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ಶೋಧ ಮುಂದುವರಿದಿದೆ.




