ಕುಂದಾಪುರ: ಹೆಲ್ಮೆಟ್ ಧರಿಸಿ ಬಂದ ಕಳ್ಳರು ಆಜ್ರಿ ಗ್ರಾಮದ ತಗ್ಗುಂಜೆಯ ಶ್ರೀ ಉಮಾಮಹೇಶ್ವರ ದೇವಸ್ಥಾನದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿದ ಘಟನೆ ನಡೆದಿದೆ.

ಎಂದಿನಂತೆ ನಾಗರಾಜ ಶೆಟ್ಟಿ ಅವರು ಬೆಳಿಗ್ಗೆ ದೇವಸ್ಥಾನದ ಕಚೇರಿಯಿಂದ ಕಾಣಿಕೆ ಡಬ್ಬಿಯನ್ನು ಹೊರತೆಗೆದು ಹೊರಗಿನ ಪ್ರಾಂಗಣದಲ್ಲಿ ಇಟ್ಟು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಅಲ್ಲಿಗೆ ಬಂದ ಕಳ್ಳರು ಕಾಣಿಕೆ ಡಬ್ಬಿಯನ್ನು ಹೊತ್ತೊಯ್ದಿದ್ದಾರೆ.

ಸ್ವಚ್ಛತಾ ಕೆಲಸ ಮುಗಿಸಿ ಬಂದು ನೋಡಿದಾಗ ಕಾಣಿಕೆ ಡಬ್ಬಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಇಬ್ಬರು ಕಳ್ಳರು ಮೊದಲು ಭಕ್ತರಂತೆ ದೇವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿ ಸುತ್ತಮುತ್ತಲಿನ ಪರಿಸರವನ್ನು ಗಮನಿಸಿದ್ದಾರೆ. ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡ ಬಳಿಕ ಹೊರಗೆ ಬಂದಿದ್ದಾರೆ. ಈ ಪೈಕಿ ಹೆಲ್ಮೆಟ್ ಧರಿಸಿದ್ದ ಒಬ್ಬ ಕಳ್ಳ ಕಾಣಿಕೆ ಡಬ್ಬಿಯನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದಾನೆ.

ಸಮೀಪದ ಮನೆಯ ನಿವಾಸಿಗಳು ಕೂಗಾಡಿದ್ದು ಇದರಿಂದ ಸಿಕ್ಕಿಬೀಳುವ ಭೀತಿಯಿಂದ ಕಳ್ಳರು ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಕಾಣಿಕೆ ಡಬ್ಬಿಯನ್ನು ಎಸೆದು ಪರಾರಿಯಾಗಿದ್ದಾರೆ.

ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಕುರಿತು ನಾಗರಾಜ ಶೆಟ್ಟಿ ಅವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


