ಭೋಪಾಲ್: ಎರಡು ಮಕ್ಕಳ ತಂದೆಯೊಂದಿಗೆ ಇನ್ಸ್ಟಾಗ್ರಾಂನಲ್ಲಿ ಶುರುವಾದ ಯುವತಿಯೊಬ್ಬಳ ಪ್ರೇಮ ಕಥೆಯೂ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಧ್ಯಪ್ರದೇಶದ ಭೋಪಾಲ್ನ ನಿಶಾತ್ಪುರ ಎಂಬಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಿವಾಸಿ ಅಶ್ರಫಿ ಅಲಿಯಾಸ್ ಸಿಯಾ(33) ಎಂದು ಗುರುತಿಸಲಾಗಿದೆ. ಆಕೆಯ ಪ್ರಿಯಕರ ,ಭೋಪಾಲ್ ನ ನಿವಾಸಿಯಾಗಿರುವ ಸಮೀರ್ ಕೊಲೆ ಮಾಡಿದ ಆರೋಪವನ್ನು ಹೊತ್ತಿರುವ ವ್ಯಕ್ತಿಯಾಗಿದ್ದಾನೆ.

ಈ ಬಗ್ಗೆ ತನಿಖಾಧಿಕಾರಿಗಳು ಮಾಧ್ಯಮಗಳಿಗೆ ನೀಡಿರುವ ಮಾಹಿತಿ ಪ್ರಕಾರ ಎರಡು ಮಕ್ಕಳ ತಂದೆ ಆಗಿರುವ ಸಮೀರ್ ಅಶ್ರಫಿ ಅಲಿಯಾಸ್ ಸಿಯಾಳನ್ನು ತನ್ನ ಕುಟುಂಬ ಸದಸ್ಯರ ಸಹಾಯದಿಂದ ಕತ್ತು ಹಿಸುಕಿ ಕೊಂದಿದ್ದಾನೆ ಎನ್ನಲಾಗಿದೆ. ಬಳಿಕ ಆಕೆಯ ಶವವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿ, ಅಪರಾಧದ ಎಲ್ಲಾ ಕುರುಹುಗಳನ್ನು ಅಳಿಸಲು ಕಮಲಾ ನಗರದ ಅವರ ಮನೆಯ ಬಳಿಯ ಸೆಪ್ಟಿಕ್ ಟ್ಯಾಂಕ್ ಗೆ ಎಸೆದಿದ್ದಾನೆ.

ಕಳೆದ ಒಂದು ವರ್ಷದ ಹಿಂದೆ ಇವರಿಬ್ಬರು ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದರು. ಆ ಬಳಿಕ ಪರಿಚಯವು ಪ್ರೀತಿ, ಪ್ರೇಮ ಸಂಬಂಧಕ್ಕೆ ತಿರುಗಿತ್ತು. ನಂತರ ಸಿಯಾ ಮಹಾರಾಷ್ಟದಲ್ಲಿರುವ ತನ್ನ ಮನೆಯನ್ನು ತೊರೆದು ತನ್ನ ಬದುಕಿನ ಬಗ್ಗೆ ಹೊಸ ಕನಸುಗಳನ್ನು ಕಟ್ಟಿಕೊಂಡು ಬೋಪಾಲ್ ನಲ್ಲಿರುವ ಪ್ರೇಮಿ ಸಮೀರ್ ಜೊತೆ ವಾಸ ಮಾಡಲು ತೆರಳಿದ್ದಾಳೆ.

ಇತ್ತ ಮೃತ ಸಿಯಾ ಮತ್ತು ಸಮೀರ್ನ ಪತ್ನಿಯ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಸಮೀರ್ನ ಸಿಯಾಳಿಂದ ಹಲವಾರು ಸಂಗತಿಗಳನ್ನು ಹೇಳಿದ ಕಾರಣ ಈ ಜಗಳಗಳು ನಡೆಯುತ್ತಿತ್ತು ಅನ್ನುವ ಮಾಹಿತಿ ಇದೆ. ಸಿಯಾಳು ಸಮೀರ್ ಮೇಲೆ ತನ್ನನ್ನು ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು. ನಿರಾಕರಿಸಿದರೆ 5 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಡುವುದರ ಜೊತೆಗೆ ಕಾನೂನು ಕ್ರಮ ಜರುಗಿಸುವಂತೆ ಬೆದರಿಕೆ ಹಾಕಿದ್ದಳು. ಪರಿಸ್ಥಿತಿ ಉದ್ವಿಗ್ನವಾಗಿದ್ದು ಇದನ್ನು ಸಹಿಸಲಾಗದೆ ಸಮೀರ್ ಪತ್ನಿ ಜಬಲ್ಪುರದಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ್ದಾಳೆ.

ಫೆ.9 ರಂದು ಸಂಜೆ, ಸಿಯಾ ಮತ್ತು ಸಮೀರ್ ನಡುವೆ ಮತ್ತೊಂದು ವಾಗ್ವಾದ ನಡೆದಿದೆ. ಈ ವೇಳೆ ಕೋಪದ ಭರದಲ್ಲಿ ಸಮೀರ್ನು ಸಿಯಾಳನ್ನು ಕುಟುಂಬಸ್ಥರ ಸಹಕಾರದಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಗುರುವಾರ ಸಂಜೆ, ಹತ್ತಿರದಲ್ಲಿ ಆಟವಾಡುತ್ತಿದ್ದ ಮಕ್ಕಳು ಟ್ಯಾಂಕ್ ನಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ದೂರು ನೀಡಿದರು. ಒಳಗೆ ಕಬ್ಬಿಣದ ಪೆಟ್ಟಿಗೆ ತೇಲುತ್ತಿರುವುದನ್ನು ಗಮನಿಸಿದ ಗ್ರಾಮದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ತಲುಪಿ ಟ್ಯಾಂಕ್ ಅನ್ನು ಹುಡುಕಿದಾಗ, ಪೆಟ್ಟಿಗೆಯೊಳಗೆ ಸಿಯಾಳ ಕೊಳೆತ ದೇಹವು ಪತ್ತೆಯಾಗಿದೆ.

ದೇಹವು ಕೊಳೆತು ಹೋಗಿದ್ದರಿಂದ, ಗಾಯದ ಗುರುತುಗಳು ಕಂಡುಬಂದಿರಲಿಲ್ಲ. ಆಕೆಯ ಕೈಯಲ್ಲಿದ್ದ ವಿಶಿಷ್ಟ ಹಚ್ಚೆ ಮತ್ತು ಆಕೆಯ ಜನ್ಮ ದಿನಾಂಕ ಎಂದು ನಂಬಲಾದ 26 ಮೇ 1992 ದಿನಾಂಕದಿಂದ ಮೃತಳನ್ನು ಗುರುತಿಸಿದರು. ಆರಂಭಿಕ ತನಿಖೆಯಲ್ಲಿ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂಬುದು ತಿಳಿದುಬಂದಿದೆ.

ಸಮೀರ್ ತಲೆಮರೆಸಿಕೊಂಡಿದ್ದರೂ, ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಪೊಲೀಸರು ಆತನ ಸಹೋದರ, ತಾಯಿ ಮತ್ತು ಸಹೋದರಿಯನ್ನು ಬಂಧಿಸಿದ್ದಾರೆ. ಸಮೀರ್ ಅವರ ಪತ್ನಿ ಕೂಡ ಪೊಲೀಸರ ನಿಗಾದಲ್ಲಿದ್ದಾರೆ. ಅಪರಾಧದ ಬಗ್ಗೆ ಹೆಚ್ಚಿನ ಕುಟುಂಬ ಸದಸ್ಯರಿಗೆ ಮಾಹಿತಿ ಇದ್ದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇನ್ನು ಕೊಲೆಯಾದ ಸಿಯಾಳು ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಮೂರು ಬಾರಿ ವಿವಾಹವಾಗಿದ್ದಳು ಎಂದು ತಿಳಿದುಬಂದಿದೆ.
ನಿಶಾತ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.



