ಸುಳ್ಯ : ಕಾರು ಚಾಲಕನೊಬ್ಬ ಪೆಟ್ರೋಲ್ ತುಂಬಿಸಿಕೊಂಡು ಹಣ ಪಾವತಿಸದೆ ಪರಾರಿಯಾದ ಘಟನೆ ಅರಂತೋಡುನ ನಯಾರ ಪೆಟ್ರೋಲ್ ಪಂಪ್ನಲ್ಲಿ ಫೆ.13 ರಂದು ನಡೆದಿದೆ.

ಕಾರು ಚಾಲಕ ಪೆಟ್ರೋಲ್ ಪಂಪ್ಗೆ ಬಂದು ತನ್ನ ವಾಹನಕ್ಕೆ ಸುಮಾರು 2,510 ರೂ. ಮೌಲ್ಯದ ಪೆಟ್ರೋಲ್ ಹಾಕಿಸಿ ಬಳಿಕ ಸಿಬ್ಬಂದಿ ಹಣ ಪಾವತಿಸಿ ಎಂದು ಕೇಳಿದಾಗ, ಚಾಲಕ ಇದ್ದಕ್ಕಿದ್ದಂತೆ ಕಾರನ್ನು ಸ್ಟಾರ್ಟ್ ಮಾಡಿ ವೇಗವಾಗಿಪರಾರಿಯಾಗಿದ್ದಾನೆ.

ಪಂಪ್ ಸಿಬ್ಬಂದಿ ತಕ್ಷಣವೇ ಜಾಲ್ಸೂರು ಚೆಕ್ ಪೋಸ್ಟ್ ಮತ್ತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು.ಮಾಹಿತಿ ಪಡೆದ ಜಾಲ್ಸೂರು ಚೆಕ್ ಪೋಸ್ಟ್ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಆಟೋ ಚಾಲಕರು ಮತ್ತು ಪೆಟ್ರೋಲ್ ಪಂಪ್ ನೌಕರರು ಪರಾರಿಯಾಗುತ್ತಿದ್ದ ವಾಹನವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಕಾರು ಚಾಲಕ ತಪ್ಪಿಸಿಕೊಂಡು ಪುತ್ತೂರಿನ ಕಡೆಗೆ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.







