ಉಡುಪಿ: ನಗರದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಹಮ್ಮಿಕೊಂಡಿರುವ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಭಗವದ್ಗೀತೆಯ 15ನೇ ಅಧ್ಯಾಯದ ಶ್ಲೋಕ ಪಠಿಸಿದರು.
ರೋಡ್ ಶೋ ಮುಗಿಸಿ ಶ್ರೀಕೃಷ್ಣ ದೇವರ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ 12.15ಕ್ಕೆ ವೇದಿಕೆಯ ಬಳಿ ಬಂದು ʻಪುರುಷೋತ್ತಮ ಯೋಗʼ ಎನ್ನುವ 15ನೇ ಅಧ್ಯಾಯದ ಶ್ಲೋಕ ಪಠಿಸಿದರು.

ಈ ಕಾರ್ಯಕ್ರಮಕ್ಕೂ ಮುನ್ನ, ಪ್ರಧಾನಿ ಮೋದಿ ಕೃಷ್ಣಮಠದ ಐವರು ಪ್ರಮುಖ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

ನಂತರ ಸ್ವಾಮೀಜಿಗಳಿಂದ ಪ್ರಧಾನಿ ಹಣೆಗೆ ತಿಲಕ ಹಚ್ಚಿ ತುಳಸಿಮಣಿ ನೀಡಲಾಯಿತು. ಮೋದಿ ಅವರು ಕನಕದಾಸರ ವಿಗ್ರಹಕ್ಕೆ ಹೂಮಾಲೆ ಅರ್ಪಿಸಿ, ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ಮೂರ್ತಿಗೆ ನಮಸ್ಕಾರ ಸಲ್ಲಿಸಿದರು. ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಪ್ರಸಾದ ನೀಡಿ, ಅಂಗಾರಕ ಅಕ್ಷತೆ ನೀಡಿದರು ಮತ್ತು ಮೋದಿ ಅವರಿಗೆ ಮಾಧ್ವ ಸಂಪ್ರದಾಯದ ತಿಲಕ ಹಚ್ಚಿದರು.

ಈ ಸಮಾವೇಶದಲ್ಲಿ ಸುಮಾರು 18 ಸಾವಿರ ಭಕ್ತರು ಪಾಲ್ಗೊಂಡಿದ್ದು, ವೇದಿಕೆಯ ಸುತ್ತಲೂ ಎಸ್ಪಿಜಿ ಮತ್ತು ಪೊಲೀಸ್ ಸಿಬ್ಬಂದಿ ಕಠಿಣ ಭದ್ರತೆಯನ್ನು ವಹಿಸಿದ್ದರು.




