ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಯೇಣಗುಡ್ಡೆ ತೇಕಲ್ ತೋಟದ ಸಮೀಪ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕದ ಮೇಲೇರಿ ಅಪಘಾತಕ್ಕೀಡಾದ ಘಟನೆ ಆ. 4ರ ಮಂಗಳವಾರ ಸಂಜೆ ನಡೆದಿದೆ.

ಮಂಗಳೂರಿನಿಂದ ಉಡುಪಿಯತ್ತ ರೋಗಿಯನ್ನು ಸಾಗಿಸುತ್ತಿದ್ದ ಆ್ಯಂಬುಲೆನ್ಸ್, ಕಟಪಾಡಿ ಜಂಕ್ಷನ್ ದಾಟಿದ ಬಳಿಕ ಡಿವಿಯೇಟರ್ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ದಾರಿ ವಿಭಾಜಕದ ಮೇಲೇರಿ, ಬಳಿಕ ಉಡುಪಿ–ಮಂಗಳೂರು ಹೆದ್ದಾರಿಯನ್ನು ದಾಟಿ ರಸ್ತೆ ಬದಿಯಲ್ಲಿ ನಿಂತಿದೆ.

ಅಪಘಾತದಲ್ಲಿ ಆ್ಯಂಬುಲೆನ್ಸ್ನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಮತ್ತೊಂದು ಆ್ಯಂಬುಲೆನ್ಸ್ ಮೂಲಕ ರೋಗಿ ಹಾಗೂ ಇತರರನ್ನು ಉಡುಪಿಯತ್ತ ಸಾಗಿಸಲಾಯಿತು.

ಘಟನೆಯ ಪರಿಣಾಮ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಳಿಕ ಸಂಚಾರವನ್ನು ಸುಗಮಗೊಳಿಸಲಾಯಿತು.




