ಕಡಬ: ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಎಸ್ಡಿಪಿಐ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಬಗ್ಗೆ ಮಹತ್ವದ ಸಭೆಯು ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರುರವರ ನೇತೃತ್ವದಲ್ಲಿ ಕಲಾರದ ರಮಳಾನ್ ಸನ್ ರೈಸ್ ರವರ ಮನೆಯಲ್ಲಿ ಜು.27 ರಂದು ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ರವರು ಪಕ್ಷದ ಕಾರ್ಯಕರ್ತರು, ನಾಯಕರು ಇನ್ನುಳಿದ ದಿನಗಳಲ್ಲಿ ಸಂಪೂರ್ಣವಾಗಿ ಚುನಾವಣಾ ಕೆಲಸ ಕಾರ್ಯಗಳಿಗೆ ತನ್ನನ್ನು ತೊಡಗಿಸಿಕೊಳ್ಳಬೇಕು, ಪ್ರತೀ ಮತದಾರರನ್ನು ಭೇಟಿ ಮಾಡಿ ಎಸ್ಡಿಪಿಐ ಪಕ್ಷದ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ತಯಾರಾಗಿರಬೇಕು ಎಂದು ಕರೆ ನೀಡಿದರು.

ಈ ಸಭೆಯಲ್ಲಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ ಅನುಮೋದನೆಗಾಗಿ ಜಿಲ್ಲಾ ಸಮಿತಿಗೆ ಕಳಿಸಲಾಗಿದೆ. ಗ್ರಾಮ ಪಂಚಾಯತ್ ನಿಂದ ಮೇಲ್ದರ್ಜೆಗೆ ಏರಿದ್ದರು ಕಳೆದ ಐದು ವರ್ಷಗಳಿಂದ ಚುನಾವಣೆ ನಡೆಯದೆ ಬಾಕಿಯಾಗಿದ್ದ ಕಡಬ ಪಟ್ಟಣ ಪಂಚಾಯತ್ ಗೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿ ಸುಮಾರು ಹದಿನೆಂಟು ದಿನ ಕಳೆದರೂ ವಾರ್ಡ್ ವಿಂಗಡಣೆ ಮತ್ತು ಮತದಾರರ ಪಟ್ಟಿ ಬಿಡುಗಡೆ ಆಗದಿರುವ ಬಗ್ಗೆ ಸಭೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಇದೊಂದು ಗಂಭೀರ ವಿಚಾರ ಇದು ಚುನಾವಣಾ ವ್ಯವಸ್ಥೆಯ ಲೋಪವಾಗಿದ್ದು ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡಲು ಸಭೆ ನಿರ್ಧರಿಸಿದೆ. ಪಟ್ಟಣ ಪಂಚಾಯತ್ ಚುನಾವಣಾ ಜಿಲ್ಲಾ ಉಸ್ತುವಾರಿಯಾಗಿ ಸಿದ್ದೀಕ್ ಅಲೆಕ್ಕಾಡಿ, ಸುಳ್ಯ ಕ್ಷೇತ್ರ ಸಮಿತಿ ಉಸ್ತುವರಿಯಾಗಿ ವಿಕ್ಟರ್ ಮಾರ್ಟೀಸ್ ರವರನ್ನು ನೇಮಿಸಲಾಯಿತು.
ಈ ಸಂದರ್ಭದಲ್ಲಿ ವಿವಿಧ ಕೆಲಸ ಕಾರ್ಯಗಳಿಗಾಗಿ ಉಸ್ತುವಾರಿಗಳನ್ನು ನೇಮಿಸಲಾಯಿತು.
ಸಭೆಯಲ್ಲಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ,ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೀರಾಝ್ ಸುಳ್ಯ,ಕಡಬ ಬ್ಲಾಕ್ ಅಧ್ಯಕ್ಷ ಬಶೀರ್ ಕಡಬ, ಕಾರ್ಯದರ್ಶಿ ಸಿದ್ದೀಕ್ ನೆಲ್ಯಾಡಿ, ಕ್ಷೇತ್ರ ಸಮಿತಿ ಸದಸ್ಯರು, ಬ್ಲಾಕ್ ಸಮಿತಿ ಸದಸ್ಯರು ಮತ್ತು ಸ್ಥಳೀಯ ನಾಯಕರು ಉಪಸ್ಥಿತರಿದ್ದರು.



