ಕಾಸರಗೋಡು: ಬಾಡೂರು ಸಮೀಪದ ಓಣಿಬಾಗಿಲಿನಲ್ಲಿ ಸಹಪಾಠಿಗಳ ಜೊತೆ ಆಟವಾಡುತ್ತಿದ್ದ ಎಂಟು ವರ್ಷದ ಬಾಲಕಿ ಆಕಸ್ಮಿಕವಾಗಿ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಮೃತಪಟ್ಟ ಘಟನೆ ಜೂನ್ 16 ರ ಸೋಮವಾರ ಸಂಜೆ ನಡೆದಿದೆ.
ಮೃತ ಬಾಲಕಿ ಓಣಿಬಾಗಿಲು ವಿನ ಮುಹಮ್ಮದ್ – ಖದೀಜತ್ ಕುಬ್ರಾ ದಂಪತಿ ಪುತ್ರಿ ಫಾತಿಮಾ ಹಿಬಾ ಎಂದು ಗುರುತಿಸಲಾಗಿದೆ.

ಸಹಪಾಠಿಗಳ ಜೊತೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಹೊಂಡಕ್ಕೆ ಬಿದ್ದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಜೊತೆಗಿದ್ದ ಮಕ್ಕಳ ಬೊಬ್ಬೆ ಕೇಳಿ ಮನೆಯವರು ಹಾಗೂ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿದ್ದು ಬಾಲಕಿಯನ್ನು ಮೇಲಕ್ಕೆತ್ತಿ ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಬಾಲಕಿಯ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಿದೆ.



