ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿನ ತೀರಾ ಬಡಕುಟುಂಬಸ್ಥರಾದ ಸೋಮಶೇಖರ -ಸುಶೀಲ ದಂಪತಿಗಾಗಿ ನಿರ್ಮಿಸಲಾದ ನೂತನ ಮನೆಯನ್ನು ಹಸ್ತಾಂತರಿಸಲಾಯಿತು.
ಮನೆಯ ಕೀಲಿಯನ್ನು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹಸ್ತಾಂತರಿಸಿ ಬಳಿಕ ಆರ್ಶೀವಚನ ನೀಡಿದ ಅವರು ಸಮಾಜದಲ್ಲಿ ಬಡಜನರ ಸೇವೆ ದೇವರ ಆರಾಧನೆಗೆ ಸಮಾನವಾಗಿದ್ದು, ಬಡ ಕುಟುಂಬಕ್ಕೆ ದಾನಿಗಳ ನೆರವಿನಲ್ಲಿ ಹೊಸ ಮನೆ ನಿರ್ಮಿಸಿ ಕೊಟ್ಟಿರುವ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಅವರ ಪರಿಶ್ರಮ ಇತರರಿಗೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮನೆ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ದಾನಿಗಳನ್ನು ಸ್ವಾಮೀಜಿ ಗೌರವಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್, ಯೋಜನಾಧಿಕಾರಿ ಪಿ.ಜಯಾನಂದ, ಮೇಲ್ವಿಚಾರಕ ಬಾಬು, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಕೋಶಾಧಿಕಾರಿ ದೇವಪ್ಪ ಪೂಜಾರಿ, ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ಪಂಜಿಕಲ್ಲು ಗ್ರಾ.ಪಂ. ಪಂಚಾಯತಿ ಅಧ್ಯಕ್ಷೆ ನಳಿನಿ ಪ್ರಸಾದ್ ಗಾಣಿಗ, ಮೆಸ್ಕಾಂ ಕಿರಿಯ ಎಂಜಿನಿಯರ್ ತಿಲಕ್ ಮತ್ತಿತರರು ಶುಭ ಹಾರೈಸಿದರು. ಉದ್ಯಮಿ ನವೀನ್ ಗಾಣಿಗ ಮಾಣಿಮಜಲು, ನವೀನ್ ಕುಂಜರಬೆಟ್ಟು, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಮೋಹನ್ ಅಣ್ಣಳಿಕೆ, ಸಿರಿಲ್ ಕಾಲರ್ೋ ಮತ್ತಿತರರು ಉಪಸ್ಥಿತರಿದ್ದರು.
ಸಂಘಟಕ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಮೋಹನ್ ಕೆ. ಶ್ರೀಯಾನ್ ರಾಯಿ ವಂದಿಸಿದರು.

ಮನೆ ನಿರ್ಮಿಸಲು ಸ್ಪೂರ್ತಿ ನೀಡಿದ ದಂಪತಿಗಳ ಮಗನ ಎಸ್ ಎಸ್ ಎಲ್ ಸಿ ಪರೀಕ್ಷೆ ಅಂಕ!
ಕಳೆದ 10 ವರ್ಷಗಳಿಂದ ಸೋಮಶೇಖರ್- ಸುಶೀಲ ದಂಪತಿ ಹಂದಿ ಸಾಕಾಣಿಕೆ ಗೂಡಿನಲ್ಲಿ ಟರ್ಪಾಲು ಹಾಸಿ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದರು. ಇವರ ಎರಡನೇ ಪುತ್ರ ಗಣೇಶ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಪಂಜಿಕಲ್ಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಗಮನ ಸೆಳೆದಿದ್ದರು. ಈ ವಿದ್ಯಾರ್ಥಿಯನ್ನು ಅಭಿನಂದಿಸಲು ಮನೆಗೆ ಬಂದಿದ್ದ ದೇವಪ್ಪ ಕುಲಾಲ್ ಅವರು ಅಲ್ಲಿನ ದುಸ್ಥಿತಿ ಕಂಡು ದಾನಿಗಳ ನೆರವಿನಲ್ಲಿ ಹೊಸ ಮನೆ ನಿರ್ಮಿಸಿದ್ದಾರೆ.
ಮೆಸ್ಕಾಂ ಕಿರಿಯ ಎಂಜಿನಿಯರ್ ತಿಲಕ್ ಉಚಿತ ವಿದ್ಯುತ್ ಸಂಪರ್ಕ ನೀಡಿದ್ದು, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರ ದಾನಿಗಳು ನೆರವು ನೀಡಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಂಟ್ವಾಳ ಲಯನ್ಸ್ ಕ್ಲಬ್ ಬಂಟ್ವಾಳ, ಹೊಟೇಲ್ ಉದ್ಯಮಿ ಮೋಹನ್ ಮೋಹನ್ ಅಣ್ಣಳಿಕೆ, ಸಿರಿಲ್ ಕಾಲರ್ೋ, ಡಾಕಯ್ಯ ಪೂಜಾರಿ, ಗಿರಿಯಪ್ಪ ಪೂಜಾರಿ ನೂಜಂತ್ತೋಡಿ, ನವೀನ್ ಸಪಲ್ಯ ಕುಂಜರಬೆಟ್ಟು, ಹರೀಶ್ ಕುದನೆ, ನವೀನ್ ಗಾಣಿಗ ಮಾಣಿಮಜಲು. ಸಂತೋಷ್ ಅಮೈ, ಸುಮಿತ್ ಕುಲಾಲ್ ಸೊರ್ನಾಡ್ ಮತ್ತಿತರರು ಸ್ಪಂದಿಸಿದ್ದಾರೆ.
ಅರ್ಚಕ ರಾಧಾಕೃಷ್ಣ ಭಟ್ ಪೆದಮಲೆ ಇವರು ಗುರುವಾರ ಗೃಹಪ್ರವೇಶ ಮತ್ತು ಗಣಹೋಮ ಮತ್ತಿತರ ಪೂಜೆ ಉಚಿತವಾಗಿ ನೆರವೇರಿಸಿ ಬಡ ಕುಟುಂಬ ಮನೆ ನಿರ್ಮಾಣದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.


