ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಇಂದು ತುಸು ಏರಿಕೆ ಕಂಡಿದೆ.

ನೀರಿನ ಅಪಾಯದ ಮಟ್ಟ 7.5 ಮೀಟರ್ ಆಗಿದ್ದು ಬೆಳಗ್ಗೆ 4.5 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನೇತ್ರಾವತಿ ಸಂಜೆ 5.9 ಮೀಟರ್ ಎತ್ತರಕ್ಕೆ ತಲುಪಿದ್ದು ನಾಳೆ ಬೆಳಗ್ಗೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ತಾಲೂಕಿನಲ್ಲಿ ಸುರಿದ ಮಳೆಗೆ ಸಾಲೆತ್ತೂರು ಗ್ರಾಮದ ಕಟ್ಟತ್ತಿಲ ಮೆದು ಎಂಬಲ್ಲಿ ಉಮಾವತಿ, ಪುದು ಗ್ರಾಮದ ಜುಮಾದಿಗುಡ್ಡೆ ಇಬ್ರಾಹಿಂ, ಪುದು ಗ್ರಾಮದ ಹೊಳೆಬದಿ ಹಾಜಿರ, ನರಿಕೊಂಬು ಗ್ರಾಮದ ಇಬ್ರಾಹಿಂ, ಅಮ್ಮುಂಜೆ ಗ್ರಾಮದ ಸುಲೋಚನ, ವಿಟ್ಲ ಮುಡ್ನೂರು ಗ್ರಾಮದ ನೂಜಿ ನಿವಾಸಿ ಹಾಜಿರಾ, ಕರೊಪಾಡಿ ಗ್ರಾಮ ದ ಒಡಿಯೂರು ನಿವಾಸಿ ಹರಿನಾಕ್ಷಿ, ಕಂಬಳಬೆಟ್ಟು ಶಾಂತಿ ನಗರ ನಿವಾಸಿ ನೆಬಿಸ, ಮಾಣಿಲ ಗ್ರಾಮದ ಕೊಂದಲಕೋಡಿ ಗಿರೀಶ ಎಂಬವರ ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.


