ಮಂಗಳೂರು: ಬಂಟ್ವಾಳ ತಾಲೂಕಿನ ಕೊಳತ್ತಮಜಲು ಎಂಬಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾಗಿರುವ ಅಬ್ದುಲ್ ರಹೀಂ ಕುಟುಂಬಕ್ಕೆ 50 ಲಕ್ಷ ಪರಿಹಾರ ಕೊಡಬೇಕು ಎಂದು ರಾಜ್ಯ ಸರಕಾರವನ್ನು ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಒತ್ತಾಯಿಸಿದೆ.
ಈ ಕುರಿತು ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಮಾತನಾಡಿ ಅಬ್ದುಲ್ ರಹೀಂ ಎಂಬ ಅಮಾಯಕ ಕೂಲಿ ಕಾರ್ಮಿಕನನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ರಾಜ್ಯ ಸರಕಾರ, ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಸಂಪೂರ್ಣ ನಿಷ್ಕ್ರಿಯತೆಗೆ ಉದಾಹರಣೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ನಶಿಸುತ್ತಿದೆ. ವಿವಿಧ ಧರ್ಮಗಳ ಜನರ ಮಧ್ಯೆ ದ್ವೇಷ ಹರಡುವ ಕೆಲಸವಾಗುತ್ತಿದೆ. ಸರಕಾರ, ಗೃಹ ಇಲಾಖೆಗೆ ಎಲ್ಲಾ ಗೊತ್ತಿದ್ದೂ ಪ್ರತಿಭಟನೆ, ಪ್ರಚೋದನಕಾರಿ ಭಾಷಣಕ್ಕೆ ಅವಕಾಶ ನೀಡುವ ಮೂಲಕ ಇಂತ ಅಮಾನುಷ ಕೃತ್ಯಗಳಿಗೆ ಕಾರಣವಾಗುತ್ತಿದೆ.

ರಹೀಮ್ ಹತ್ಯೆಯಲ್ಲಿ ಯಾರೇ ಭಾಗಿಯಾಗಿರಲಿ ಅವರನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಅವರ ಜೊತೆ ದ್ವೇಷ ಭಾಷಣ ಮಾಡುವವರನ್ನು ಕೂಡಾ ಬಂಧಿಸಬೇಕು ಎಂದರು.
ಮೃತ ರಹೀಮ್ ಕುಟುಂಬಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಮಿತಿ ಅಧ್ಯಕ್ಷ ರಫೀಖ್ ಅಹ್ಮದ್ ಹುದವಿ ಮುಪ್ತಿ, ಕೋಶಾಧಿಕಾರಿ ಸಯ್ಯದ್ ಅಮೀರ್ ತಂಜಳ್ ಕಿನ್ಯ, ಪ್ರ.ಕಾರ್ಯದರ್ಶಿ ಓ.ಪಿ.ಅಶ್ರಫ್, ಕಾರ್ಯಕಾರಿ ಸದಸ್ಯ ಖಾಸಿಂ ದಾರಿಮಿ, ರಿಯಾಜ್ ರಹ್ಮಾನಿ ಮತ್ತಿತರರು ಉಪಸ್ಥಿತರಿದ್ದರು.


