Breaking
22 Mar 2026, Sun

ಮಂಗಳೂರಿನ ಗಣಿ ಇಲಾಖೆಯ ಕಡು ಭ್ರಷ್ಟ ಅಧಿಕಾರಿ ಒಂದೇ ವರ್ಷದಲ್ಲಿ ಎರಡನೇ ಬಾರಿಗೆ ಲೋಕಾಯುಕ್ತ ಬಲೆಗೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಮತ್ತು ಹಿರಿಯ ಭೂವಿಜ್ಞಾನಿ ಆಗಿರುವ ಕಡು ಭ್ರಷ್ಟ ಮಹಿಳಾ ಅಧಿಕಾರಿ ಕೃಷ್ಣವೇಣಿ ಒಂದು ವರ್ಷದ ಅಂತರದಲ್ಲಿ ಎರಡನೇ ಬಾರಿಗೆ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದಿದ್ದಾರೆ.

ಉಳ್ಳಾಲ ತಾಲೂಕಿನ ಇರಾ ಗ್ರಾಮದ ವ್ಯಕ್ತಿಯೊಬ್ಬರು 1.39 ಎಕರೆ ಜಮೀನಿನ ಪೈಕಿ 35 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟುವುದಕ್ಕಾಗಿ ಅಲ್ಲಿದ್ದ ಕಲ್ಲುಗಳನ್ನು ತೆರವು ಮಾಡಲು ಗಣಿ ಇಲಾಖೆಯ ಅನುಮತಿ ಕೋರಿದ್ದರು. ಈ ಬಗ್ಗೆ 2024ರ ಅ.28ರಂದು ಗಣಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಅನುಮತಿ ಪತ್ರ ನೀಡಿರಲಿಲ್ಲ. ವಿಚಾರಿಸಲು ಗಣಿ ಇಲಾಖೆಗೆ ಹೋದಾಗ ಉಪ ನಿರ್ದೇಶಕಿ ಕೃಷ್ಣವೇಣಿ ತನ್ನ ಕೊಠಡಿಗೆ ಸಿಬಂದಿ ಪ್ರದೀಪ್ ಎಂಬವರನ್ನು ಕರೆಸಿ, ಈ ಫೈಲಿಗೆ 50 ಸಾವಿರ ತೆಗೆದುಕೊಳ್ಳಿ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಇದರಿಂದ ನೊಂದ ಅರ್ಜಿದಾರ ಇದರ ಬಗ್ಗೆ ಮಂಗಳೂರು ಲೋಕಾಯುಕ್ತ ಇಲಾಖೆಗೆ ದೂರು ಸಲ್ಲಿಸಿದ್ದರು. ಮೇ 28ರಂದು ಅರ್ಜಿದಾರ ಲಂಚದ ಹಣ 50 ಸಾವಿರವನ್ನು ಮಲ್ಲಿಕಟ್ಟೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಚೇರಿಯಲ್ಲಿ ವಾಹನ ಚಾಲಕ ಮಧು ಎಂಬಾತನ ಮೂಲಕ ಕೃಷ್ಣವೇಣಿ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ದಾಳಿ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ಇಬ್ಬರನ್ನೂ ಬಂಧಿಸಿದ್ದಾರೆ.

ಒಂದು ವರ್ಷದ ಹಿಂದೆ ಅಕ್ರಮ ಆಸ್ತಿ ಗಳಿಕೆ ವಿಚಾರದಲ್ಲಿ ಈ ಅಧಿಕಾರಿಯ ಮೇಲೆ ಲೋಕಾಯುಕ್ತ ದಾಳಿ ಮಾಡಿ, ಬೆಂಗಳೂರು ಸೇರಿ ವಿವಿಧ ಕಡೆ 11 ಕೋಟಿಯಷ್ಟು ಆಸ್ತಿ ಪತ್ತೆ ಮಾಡಿದ್ದರು. ಅಕ್ರಮ ಆಸ್ತಿ ಪ್ರಕರಣದಲ್ಲಿ ಒಮ್ಮೆಗೆ ಬಂಧನ ಆದರೂ, ಈಕೆಯನ್ನು ಅದೇ ಜಾಗದಲ್ಲಿ ಮುಂದುವರಿಸಲಾಗಿತ್ತು. ಕಳೆದ ಜುಲೈ ತಿಂಗಳಲ್ಲಿ ಮಂಗಳೂರಿಗೆ ಬಂದಿದ್ದ ಉಪ ಲೋಕಾಯುಕ್ತ ವೀರಪ್ಪ ಅವರೂ ಕೃಷ್ಣವೇಣಿ ಬೇಜವಾಬ್ದಾರಿ ನಡೆಯ ಬಗ್ಗೆ ತರಾಟೆ ಎತ್ತಿಕೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರೂ ಇದೇ ಮಹಿಳಾ ಅಧಿಕಾರಿಯ ನಿರ್ಲಕ್ಷ್ಯ ಧೋರಣೆ ಬಗ್ಗೆ ಪ್ರಶ್ನಿಸಿದ್ದಲ್ಲದೆ, ಕ್ರಮಕ್ಕೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.ಆದರೆ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದರೂ ಅದೇ ಅಧಿಕಾರಿಯನ್ನು ಮಂಗಳೂರಿನಲ್ಲಿ ವರ್ಷ ಕಳೆದರೂ ಉಳಿಸಿಕೊಂಡಿದ್ದೇ ನಮ್ಮ ವ್ಯವಸ್ಥೆಯ ದುರಂತ .

ಇದೀಗ ಎರಡನೇ ಬಾರಿಗೆ ಮಂಗಳೂರಿನಲ್ಲಿಯೇ ಕೃಷ್ಣವೇಣಿ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಾನ ಮರ್ಯಾದೆ ಇಲ್ಲದೆ ಜನಸಾಮಾನ್ಯರಿಂದ ಹಣಕ್ಕಾಗಿ ಪೀಡಿಸುತ್ತಿರುವ ಇಂಥವರನ್ನು ಸಸ್ಪೆಂಡ್ ಮಾಡೋದಲ್ಲ, ವಜಾನೇ ಮಾಡಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಾಯುಕ್ತ ಪ್ರಭಾರ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಾನ ಪಿ. ಕುಮಾರ್, ಪೊಲೀಸ್ ನಿರೀಕ್ಷಕರಾದ ಸುರೇಶ್ ಕುಮಾರ್, ಭಾರತಿ ಜಿ., ಚಂದ್ರಶೇಖರ್ ಕೆ.ಎನ್, ಉಡುಪಿ ಜಿಲ್ಲಾ ಲೋಕಾಯುಕ್ತ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯಕ್ ಮತ್ತು ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *