ಬಂಟ್ವಾಳ: ರಸ್ತೆ ಕುಸಿಯುವುದರ ಜೊತೆಗೆ ಬಹುಗ್ರಾಮ ಕುಡಿಯುವ ನೀರಿನ ಪೈಪ್ ಲೈನ್ ಗೂ ಹಾನಿಯಾದ ಘಟನೆ ಬಂಟ್ವಾಳದ ಮಣಿಹಳ್ಳ- ಅಜಿಲಮೊಗರು ರಸ್ತೆಯ ಅಲ್ಲಿಪಾದೆ ಅಣೆಜ ತಿರುವಿನಲ್ಲಿ ಮೇ.25ರಂದು ನಡೆದಿದೆ.

ಸರಪಾಡಿ ಬಹುಗ್ರಾಮ ಯೋಜನೆಯ ಮೂಲಕ ತಾಲೂಕಿನ ಐದು ಗ್ರಾಮ ಪಂಚಾಯತ್ ಗಳಾದ ಇರ್ವತ್ತೂರು, ಪಿಲಾತಬೆಟ್ಟು, ಕಾವಳಪಡೂರು, ಕಾವಳಮೂಡೂರು, ನಾವೂರು ಗ್ರಾ.ಪಂ.ಗಳಿಗೆ ಇದೇ ರಸ್ತೆಯಲ್ಲಿ ಪೈಪ್ ಲೈನ್ ಹಾದು ಹೋಗಿದೆ.

ಇದೀಗ ರಸ್ತೆ ಕುಸಿತದಿಂದ ನೀರಿನ ಪೈಪ್ ಲೈನ್ ಗೆ ಹಾನಿಯಾಗಿದ್ದು ಈ ಎಲ್ಲಾ ಪಂಚಾಯತ್ ಗಳಿಗೂ ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.ಇಲ್ಲಿ ಕಳೆದ ವರ್ಷ ರಸ್ತೆ ಕುಸಿದಿದ್ದು, ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿತ್ತು. ಆದರೆ ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯದ ಪರಿಣಾಮ ಕಾಮಗಾರಿ ವಿಳಂಬವಾಗಿ ಆರಂಭಗೊಂಡು ಈ ಬಾರಿ ಮತ್ತೆ ಕುಸಿದಿದೆ.
ನೀರಿನ ಪೈಪ್ ಲೈನ್ ಕೂಡ ಕೆಳಕ್ಕೆ ಬಿದ್ದಿದೆ ಎಂಬ ಆರೋಪ ಕೇಳಿ ಬಂದಿದೆ.


