ನವದೆಹಲಿ: ದೆಹಲಿಯ ಇಎಸ್ಐಸಿ ಪ್ರಧಾನ ಕಛೇರಿಯಲ್ಲಿ ESIC ಮಹಾನಿರ್ದೇಶಕ ಶ್ರೀ ಅಶೋಕ್ ಕುಮಾರ್ ಸಿಂಗ್( IAS) ಅವರನ್ನು ಸಂಸದ ಕ್ಯಾ.ಬ್ರಿಜೇಶ್ ಚೌಟ ಇಂದು ಭೇಟಿಯಾಗಿ ಮಂಗಳೂರಿನ ಇಎಸ್ಐ ಆಸ್ಪತ್ರೆಯ ಸಮಸ್ಯೆಗಳ ಕುರಿತು ಚರ್ಚಿಸಿದರು.
ಇತ್ತೀಚೆಗೆ ಸಂಸದರು ಮಂಗಳೂರಿನ ಇಎಸ್ಐ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಸಂಧರ್ಭದಲ್ಲಿ, ಆಸ್ಪತ್ರೆಯ ರೋಗಿಗಳು ಅಲ್ಲಿಯ ಸಮಸ್ಯೆಯ ಕುರಿತು ಸಂಸದರ ಗಮನಕ್ಕೆ ತಂದಿದ್ದರು.
ಇ ಕುರಿತು ಇಂದು ದೆಹಲಿಯ ಇಎಸ್ಐಸಿ ಪ್ರಧಾನ ಕಛೇರಿಯಲ್ಲಿ ESIC ಮಹಾನಿರ್ದೇಶಕ ಶ್ರೀ ಅಶೋಕ್ ಕುಮಾರ್ ಸಿಂಗ್( IAS) ಅವರನ್ನು ಭೇಟಿ ಮಾಡಿ ಆಸ್ಪತ್ರೆಯ ಮೂಲಸೌಕರ್ಯ, ಸಿಬ್ಬಂದಿ, ಪೋರ್ಟಲ್ ಮತ್ತು ಸರ್ವರ್ ಸಮಸ್ಯೆ ಹಾಗೂ ಅವುಗಳ ಉನ್ನತೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು.
ಇದರ ಜೊತೆಗೆ ಮಂಗಳೂರಿನ ಕೆಲವು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಗುತ್ತಿಗೆ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ನಿರಾಕರಿಸಿರುವುದು ಮತ್ತು ಪ್ರಸ್ತುತ 21,000 ರೂಪಾಯಿಗಳ ವೇತನ ಮಿತಿಗಿಂತ ಹೆಚ್ಚು ಸಂಪಾದಿಸುವ ಕಾರ್ಮಿಕರಿಗೂ ಇಎಸ್ಐಸಿ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗುವಂತೆ ಮಾಡಬೇಕಾದ ಅಗತ್ಯತೆಯ ಕುರಿತು ಈ ಸಂದರ್ಭದಲ್ಲಿ ಮಹಾನಿರ್ದೇಶಕರಿಗೆ ಮನದಟ್ಟು ಮಾಡಿಸಿದರು.




