ವಿಟ್ಲ: ವಿಟ್ಲ ರೋಟರಿ ಕ್ಲಬ್ ಗೆ ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಅಧಿಕೃತ ಭೇಟಿ ನೀಡಿ ವಿಟ್ಲ ಕೊಡಂಗೆ ಆರ್ಥಿಕ ಅಶಕ್ತೆ ಪುಷ್ಪಾ ಇವರಿಗೆ ಸುಮಾರು 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮನೆ ಹಸ್ತಾಂತರಿಸಲಾಯಿತು ಹಾಗೂ ವಿವಿಧ ಸೇವಾಕಾರ್ಯಗಳನ್ನು ಲೋಕಾರ್ಪಣೆ ಗೊಳಿಸಿದರು.
ಸಂಜೆ ವಿಟ್ಲ ಭಾರತ್ ಆಡಿಟೋರಿಯಂನಲ್ಲಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿಟ್ಲ ರೋಟರಿ ಕ್ಲಬ್ ನಡೆಸಿದ ಪ್ರತಿಯೊಂದು ಚಟುವಟಿಕೆಗಳು ಗಮನಾರ್ಹವಾಗಿದೆ. ನಾವು ಕೊಡುವ ಕೊಡುಗೆ, ಮಾಡುವ ಕಾರ್ಯ ಸದಾ ನೆನಪಿನಲ್ಲಿ ಉಳಿಯುವಂತಾಗಬೇಕು.ಮಾನವೀಯತೆಗೆ ಬೆಳಕಾಗುವ ಸಹಾಯಹಸ್ತ ರೋಟರಿಯಿಂದ ನಡೆಯಬೇಕು. ಪ್ರಸ್ತುತ ವರ್ಷದ ಸೇವಾ ಕಾರ್ಯದಂತೆ ಮುಂದಿನ ವರ್ಷವೂ ನಡೆಯಲಿ ಎಂದು ತಿಳಿಸಿದರು.
ಅಸಿಸ್ಟೆಂಟ್ ಗವರ್ನರ್ ಜಯರಾಮ ರೈ, ಝೋನಲ್ ಲೆಫ್ಟಿನೆಂಟ್ ಪಲ್ಲವಿ ಕಾರಂತ್ ಶುಭ ಹಾರೈಸಿದರು.
ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ಹರೀಶ್ ಪೂಜಾರಿ ಸಿ.ಹೆಚ್, ಕಾರ್ಯದರ್ಶಿ ಸೋಮಶೇಖರ್, ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಮಾರ್, ನಿಯೋಜಿತ ಅಧ್ಯಕ್ಷ ರವಿ.ಬಿ.ಕೆ ಭಾಗವಹಿಸಿದ್ದರು. ಮೋಹನ ಮೈರ, ಸಂಜೀವ ಪೂಜಾರಿ, ಪ್ರವೀಣ್, ವಸಂತ ಶೆಟ್ಟಿ, ಭಾಸ್ಕರ ಶೆಟ್ಟಿ, ದಾಸಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಸಾಧಕರಾದ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀನಿವಾಸ ಗೌಡ, ದೇಹದಾರ್ಢ್ಯ ಶಿಕ್ಷಕ ಸುನಿಲ್ ಪಾಯಸ್, ಸಾಧಕಿ ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ನೆಬಿಸಾ ಅವರನ್ನು ಸನ್ಮಾನಿಸಲಾಯಿತು.
ಸುನಂದಾ ಇವರಿಗೆ 10 ಸಾವಿರ ಧನ ಸಹಾಯ, ಪ್ರತಿಭಾವಂತ ವಿದ್ಯಾರ್ಥಿಗಳಾದ ಸಮೃದ್ಧಿ, ಅಕ್ಷತಾ ಮತ್ತು ಕೌಶಿಕ್ ಇವರಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.ಧನಂಜಯ್ ಹೊಸ ಸದಸ್ಯರನ್ನು ಪರಿಚಯಿಸಿದರು. ರೋಟಾವಿಷನ್ ಪತ್ರಿಕೆ ಅನಾವರಣಗೊಳಿಸಲಾಯಿತು.ಡಾ.ಚರಣ್ ಕಜೆ, ಪ್ರಕಾಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಿಯೋಜಿತ ಕಾರ್ಯದರ್ಶಿ ದಿನೇಶ್ ವಂದಿಸಿದರು.




