ಹಳೆಯಂಗಡಿ: ತೋಕೂರು ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಅಷ್ಟಮಿ ಪ್ರಯುಕ್ತ ನಡೆಯುತ್ತಿದ್ದ ಭಜನೆ ಕಾರ್ಯಕ್ರಮದಲ್ಲಿ ಭಜನೆ ಮಾಡುತ್ತಲೇ ಯುವಕನೊಬ್ಬ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಶುಕ್ರವಾರ (ಸೆ.4) ತಡರಾತ್ರಿ ನಡೆದಿದೆ.

ಮೃತರನ್ನು ತೋಕೂರು ನಿವಾಸಿ ಶ್ರೀನಾಥ್ ಶೆಟ್ಟಿಗಾರ್ (38) ಎಂದು ಗುರುತಿಸಲಾಗಿದೆ. ಭಜನೆ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದುಬಿದ್ದ ಶ್ರೀನಾಥ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಶ್ರೀನಾಥ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ಅಷ್ಟಮಿ ಪ್ರಯುಕ್ತ ಊರಿಗೆ ಆಗಮಿಸಿದ್ದರು. ಅಲ್ಲದೆ, ಸ್ಥಳೀಯ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರ ಅಕಾಲಿಕ ನಿಧನಕ್ಕೆ ಸ್ಥಳೀಯರು ಹಾಗೂ ಸ್ನೇಹಿತರು ಸಂತಾಪ ವ್ಯಕ್ತಪಡಿಸಿದ್ದಾರೆ.



