Breaking
2 Sep 2026, Wed

ಉಡುಪಿ: ‘ಊರ್ಮಿಳಾ’ ಏಕವ್ಯಕ್ತಿ ನಾಟಕ ರಾಷ್ಟ್ರೀಯ ಮಟ್ಟದ ಅಭಿವ್ಯಕ್ತಿ: ಪ್ರಮೋದ್ ಮಧ್ವರಾಜ್

ಉಡುಪಿ: ಊರ್ಮಿಳಾ ಏಕ ವ್ಯಕ್ತಿ ನಾಟಕವು ಎಲ್ಲಾ ದೃಷ್ಟಿಯಿಂದಲೂ ಅತ್ಯುನ್ನತ ದರ್ಜೆಯದಾಗಿದ್ದು ಸಾಹಿತ್ಯ, ನಿರ್ದೇಶನ, ಪ್ರಸ್ತುತಿ, ಸಂಗೀತ,ರಂಗಸಜ್ಜಿಕೆ, ಧ್ವನಿ, ಬೆಳಕು ಮುಂತಾದ ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟವನ್ನು ನೆನಪಿಸುವಂತೆ ಮಾಡಿದೆ.

ಅಯನಾ. ವಿ. ರಮಣ್ ಅವರ ಅಭಿನಯವಂತೂ ಪರಾಕಾಷ್ಠೆಯಲ್ಲಿದ್ದು ನಿರಂತರ ಒಂದು ಗಂಟೆಯ ಅವಧಿಯಲ್ಲಿ ಬಹುಪಾತ್ರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಈ ಕಲಾವಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಎಲ್ಲಾ ಪ್ರತಿಭೆ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಕರ್ನಾಟಕ ಸರಕಾರದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ಅವರು ಗೀತಾ ಮಂದಿರದ ಶ್ರೀಪುತ್ತಿಗೆ ನೃಸಿಂಹ ಅಡಿಟೋರಿಯಂನಲ್ಲಿ ವಿಶ್ವಮಾನ್ಯ ಯತಿಕುಲ ಚಕ್ರವರ್ತಿ ಡಾ. ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಶುಭಾಶೀರ್ವಾದಗಳೊಂದಿಗೆ ಆಗಸ್ಟ್ 30 ರಂದು ನಡೆದ, ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರು ಬರೆದು ಡಾ.ಶ್ರೀಪಾದ ಭಟ್ ನಿರ್ದೇಶಿಸಿದ ಊರ್ಮಿಳಾ ನಾಟಕವನ್ನು ಸಂಪೂರ್ಣ ವೀಕ್ಷಿಸಿ ಮಾತನಾಡುತ್ತಿದ್ದರು.

ಶ್ರೀಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ ಅಧ್ಯಕ್ಷತೆ ವಹಿಸಿ ಶ್ರೀಮಠದ ಶಿಷ್ಯರೂ ದಾನಿಗಳೂ ಆಗಿರುವ ಗೀತಾ ಮಾತೆ ಪ್ರಭಾ ವಿಶ್ವನಾಥ ಶೆಣೈ ದಂಪತಿಯನ್ನು ಸಮ್ಮಾನಿಸಿದರು. ಇದೇ ಸಂದರ್ಭದಲ್ಲಿ ದೂರದರ್ಶನ ಕಲಾವಿದೆ ವಿದುಷಿ ಅಯನಾ. ವಿ .ರಮಣ್ ಅವರನ್ನು ಗೌರವಿಸಲಾಯಿತು.

ಸಂಗೀತ ವಿದುಷಿ ಡಾ. ಉಷಾ ಹೆಬ್ಬಾರ್, ನಾಟಕದ ಸಂಗೀತ ನಿರ್ವಹಣೆ ಮಾಡಿದ ಡಾ. ಮುಕಾಂಬಿಕಾ ಜಿ. ಎಸ್. ಬೆಳಕು ನಿರ್ವಹಿಸಿದ ಸುಜಿತ್ ಕಾರ್ಕಳ, ಶ್ರೀಮಠದ ರಮೇಶ್ ಭಟ್ ಉಪಸ್ಥಿತರಿದ್ದರು. ಗೀತಾ ಮಂದಿರದ ಕೆ.ವಿ. ರಮಣಾಚಾರ್ಯ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *