ಕೊಯಿಲ: ಮೂಡಬಿದ್ರೆ–ಬಂಟ್ವಾಳ ಲೋಕೋಪಯೋಗಿ ರಸ್ತೆಯಲ್ಲಿ ಭಾರೀ ವಾಹನಗಳ ನಿರಂತರ ಸಂಚಾರದಿಂದ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಉಂಟಾಗಿ, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿಯಿಂದಲೂ ರಸ್ತೆ ಶೀಘ್ರವಾಗಿ ಹದಗೆಟ್ಟಿರುವ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಕಾಮಗಾರಿ ನಿರ್ವಹಿಸಿದವರು ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಹಾಗೆಯೇ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಯಂತ್ರಿಸಬೇಕು ಎಂದು ಕೊಯಿಲ ಶ್ರೀ ಗುರುಗಣೇಶ ಭಜನಾ ಮಂಡಳಿ ನೇತೃತ್ವದಲ್ಲಿ ವಾಹನಗಳನ್ನು ತಡೆದು, ಬಳಿಕ ಪಕ್ಷಾತೀತವಾಗಿ ಪೊಲೀಸ್ ಠಾಣೆಗೆ ದೂರು ಅರ್ಜಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಪ್ರಮುಖರಾದ ವಸಂತ ಕುಮಾರ್ ಅಣ್ಣಳಿಕೆ, ಜಗದೀಶ್ ಕೊಯಿಲ, ರಶ್ಮಿತ್ ಶೆಟ್ಟಿ, ಸಂತೋಷ್ ರಾಯಿ ಬೆಟ್ಟು ಹಾಗೂ ಕೊಯಿಲ ಗ್ರಾಮಗಳ ಸಾರ್ವಜನಿಕರು ಉಪಸ್ಥಿತರಿದ್ದರು.



