ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ ಎಂದು ನಂಬಿಸಿ, ಬಹುಮಾನದ ಹಣ ಪಡೆಯಲು ತೆರಿಗೆ ಪಾವತಿಸಬೇಕು ಎಂದು ಹೇಳಿ ವ್ಯಕ್ತಿಯೊಬ್ಬರಿಂದ 3.81 ಲಕ್ಷ ರೂ. ವಂಚಿಸಿರುವ ಘಟನೆಗೆ ಸಂಬಂಧಿಸಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

42 ವರ್ಷದ ದೂರುದಾರರಿಗೆ ಆ.14ರಂದು ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಕೇರಳ ಲಾಟರಿಯಲ್ಲಿ 8 ಲಕ್ಷ ರೂ. ಬಹುಮಾನ ಬಂದಿದೆ ಎಂದು ಕರೆ ಮಾಡಿದ ವ್ಯಕ್ತಿ ನಂಬಿಸಿದ್ದಾನೆ. ಬಹುಮಾನದ ಹಣ ಪಡೆಯಲು ಮೊದಲು ತೆರಿಗೆ ಹಣ ಪಾವತಿಸಬೇಕೆಂದು ತಿಳಿಸಿದ್ದಾನೆ.

ಇದನ್ನು ನಂಬಿದ ದೂರುದಾರರು, ಅಪರಿಚಿತ ವ್ಯಕ್ತಿ ಕಳುಹಿಸಿದ ಗೂಗಲ್ ಪೇ ಹಾಗೂ ಫೋನ್ ಪೇ ಸ್ಕ್ಯಾನರ್ಗಳಿಗೆ ಆ.15ರಿಂದ 26ರವರೆಗೆ ಹಂತ ಹಂತವಾಗಿ ಒಟ್ಟು 3,81,300 ರೂ. ವರ್ಗಾಯಿಸಿದ್ದಾರೆ.

ಬಳಿಕ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಲಾಟರಿ ಬಹುಮಾನದ ಹಣ ದ್ವಿಗುಣಗೊಂಡಿದ್ದು, ಅದಕ್ಕಾಗಿ ಮತ್ತಷ್ಟು ತೆರಿಗೆ ಪಾವತಿಸಬೇಕೆಂದು ಒತ್ತಾಯಿಸಿದ್ದಾನೆ. ಈ ವೇಳೆ ತಮಗೆ ವಂಚನೆಯಾಗಿರುವುದು ಅರಿವಾದ ದೂರುದಾರರು ಸೈಬರ್ ಹೆಲ್ಪ್ಲೈನ್ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.


