ಉಡುಪಿ: ಅಧಿಕ ಬಡ್ಡಿ ದರದಲ್ಲಿ ಸಾಲ ನೀಡಿದ ಬಳಿಕ, ಕಂತಿನ ಬಾಕಿ ಹಣ ವಸೂಲಿಗಾಗಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಫೈನಾನ್ಸ್ ಸಂಸ್ಥೆಯೊಂದರ ಮೂವರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.

ಕುಂಜಾಲ್ ಪ್ರದೇಶದಲ್ಲಿ ಸಾಲದ ಬಾಕಿ ಹಣದ ವಿಚಾರವಾಗಿ ಗಣೇಶ್ ಗಾಣಿಗ ಎಂಬವರ ಬೈಕನ್ನು ಬಲವಂತವಾಗಿ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲದೆ, ಗಣೇಶ್ ಗಾಣಿಗ ಅವರ ಜಾಮೀನುದಾರ ರಾಜೇಶ್ ನಾಯ್ಕ ಅವರಿಗೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ರಾಜೇಶ್ ನಾಯ್ಕ ಅವರು ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಮಂಗಳೂರು ಕುಳಾಯಿ ನಿವಾಸಿ ಸಂದೀಪ್ ಶೆಟ್ಟಿ ಹಾಗೂ ಕಾವೂರು ನಿವಾಸಿ ವಿಜೀತ್ ಶೆಟ್ಟಿ ಅವರನ್ನು ಆ.6ರಂದು ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಮಳವೂರು ನಿವಾಸಿ ಸಂಪತ್ನನ್ನು ಆ.13ರಂದು ಬಂಧಿಸಲಾಗಿದೆ.

ಆರೋಪಿಗಳಿಂದ ಬಲವಂತವಾಗಿ ತೆಗೆದುಕೊಂಡು ಹೋಗಲಾಗಿದ್ದ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.


