ನವದೆಹಲಿ: ದೇಶದಲ್ಲಿ ಮಾನ್ಯ ವಿಮೆ ಇಲ್ಲದೇ ಸಂಚರಿಸುತ್ತಿರುವ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಪೂರೈಕೆಯನ್ನು ನಿರಾಕರಿಸುವ ಕುರಿತು ಪ್ರಾಯೋಗಿಕ (ಪೈಲಟ್) ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಈ ಸಂಬಂಧ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದ್ದು, ಪೆಟ್ರೋಲ್ ಅಥವಾ ಡೀಸೆಲ್ ತುಂಬಿಸುವ ಮೊದಲು ವಾಹನಕ್ಕೆ ಮಾನ್ಯ ವಿಮೆ ಇದೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆ ಜಾರಿಗೆ ತರಲು ಸಾಧ್ಯತೆಗಳನ್ನು ಅಧ್ಯಯನ ಮಾಡುವಂತೆ ಹೇಳಿದೆ.

ಪ್ರಸ್ತಾವಿತ ಯೋಜನೆಯಂತೆ, ಮಾನ್ಯ ವಿಮೆ ಇಲ್ಲದ ವಾಹನಗಳಿಗೆ ಅಗತ್ಯ ವಿಮೆ ಮಾಡಿಸಿಕೊಳ್ಳುವವರೆಗೆ ಇಂಧನ ಪೂರೈಕೆಯನ್ನು ನಿರಾಕರಿಸುವ ವ್ಯವಸ್ಥೆಯನ್ನು ಜಾರಿಗೆ ತರಬಹುದು.

ರಸ್ತೆ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಹಲವು ಕ್ರಮಗಳನ್ನು ಸಹ ಸೂಚಿಸಿದೆ. ಸ್ವಯಂಚಾಲಿತ ನಂಬರ್ ಪ್ಲೇಟ್ ಗುರುತಿಸುವ (ANPR) ಕ್ಯಾಮೆರಾಗಳನ್ನು ವಾಹನ ಹಾಗೂ ವಿಮಾ ಡೇಟಾಬೇಸ್ಗೆ ಸಂಪರ್ಕಿಸುವುದು, ಸಂಚಾರ ಪೊಲೀಸರಿಗೆ ಸ್ಥಳದಲ್ಲೇ ವಿಮೆ ಪರಿಶೀಲಿಸಲು ಮೊಬೈಲ್ ಸಾಧನಗಳನ್ನು ಒದಗಿಸುವುದು ಹಾಗೂ ಹೊಸ ವಾಹನಗಳಿಗೆ ಕಡ್ಡಾಯ ಮೂರನೇ ವ್ಯಕ್ತಿಯ ವಿಮೆಯ ಅವಧಿಯನ್ನು ವಿಸ್ತರಿಸುವ ಕುರಿತು ಪರಿಗಣಿಸುವಂತೆ ತಿಳಿಸಿದೆ.

ಕಡ್ಡಾಯ ಮೋಟಾರು ವಾಹನ ವಿಮಾ ನಿಯಮಗಳ ಪಾಲನೆಯನ್ನು ಹೆಚ್ಚಿಸುವುದು ಮತ್ತು ವಿಮೆ ಇಲ್ಲದ ವಾಹನಗಳ ಸಂಚಾರವನ್ನು ನಿಯಂತ್ರಿಸುವ ಉದ್ದೇಶದಿಂದ ಈ ಪೈಲಟ್ ಯೋಜನೆ ರೂಪಿಸಲಾಗುತ್ತಿದೆ.




