Breaking
3 Jun 2026, Wed

ಬಂಟ್ವಾಳ: ತುಳುನಾಡ ಪೊರ್ಲು ಸೇವಾ ಟ್ರಸ್ಟ್‌ನ ಆಡಳಿತ ಕಚೇರಿ ಉದ್ಘಾಟನೆ

ಬಂಟ್ವಾಳ: ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಜನಮನ ಗೆದ್ದಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.), ದಕ್ಷಿಣ ಕನ್ನಡ ಇದರ ನೂತನ ಆಡಳಿತ ಕಚೇರಿ ಉದ್ಘಾಟನೆ ಹಾಗೂ 2026ನೇ ಸಾಲಿನ ಶೈಕ್ಷಣಿಕ ಸೇವಾ ಯೋಜನೆಯಡಿ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಅಜಿಲಮೊಗರಿನ ನೇಲ್ಯಪಲ್ಕೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಟ್ರಸ್ಟ್‌ನ ನೂತನ ಆಡಳಿತ ಕಚೇರಿಯನ್ನು ಸರಪಾಡಿ ಪ್ರೌಢಶಾಲೆಯ ಅಧ್ಯಕ್ಷರಾದ ಶ್ರೀ ಪುರುಷೋತ್ತಮ ಪೂಜಾರಿ ಮೊಗರು ಮಜಲು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮವನ್ನು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್(ರಿ.)ನ ಸಂಸ್ಥಾಪಕರಾದ ಶ್ರೀ ಅರ್ಜುನ್ ಭಂಡಾರ್ಕರ್ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)ನ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಶ್ರೀ ನೀತು ಪೂಜಾರಿ ಅಜಿಲಮೊಗರು ವಹಿಸಿದ್ದರು.

ವೇದಿಕೆಯಲ್ಲಿ ಶ್ರೀಮತಿ ಕುಸುಮಾವತಿ ಕೃಷ್ಣಪ್ಪ ಪೂಜಾರಿ ನೇಲ್ಯಪಲ್ಕೆ, ಮಣಿನಾಲ್ಕೂರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಸಂಜೀವ ಪೂಜಾರಿ ಕಟ್ಟದಡೆ, ಮಣಿನಾಲ್ಕೂರು ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಟ್ರಸ್ಟಿಗಳಾದ ಶ್ರೀ ಶಿವಪ್ಪ ಪೂಜಾರಿ ಹಟದಡ್ಕ, ಶ್ರೀ ಜಯ ನಾಯ್ಕ್ ನೇಲ್ಯಪಲ್ಕೆ, ಹಿರಿಯರಾದ ಶ್ರೀ ಪರಮೇಶ್ವರ ಪೂಜಾರಿ ನೇಲ್ಯಪಲ್ಕೆ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚೆನ್ನಮ್ಮ ಟೀಚರ್, ಹಿರಿಯ ಸೇವಾ ಮಾಣಿಕ್ಯರಾದ ಶ್ರೀಮತಿ ಯಶೋಧ ಹಾಗೂ ಟ್ರಸ್ಟ್‌ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ 2024-25ನೇ ಸಾಲಿನ ಐಚ್ಛಿಕ ಕನ್ನಡ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ 8.61 ಸಿಜಿಪಿಎ ಅಂಕಗಳೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿ ಚಿನ್ನದ ಪದಕ ಹಾಗೂ ಏಳು ನಗದು ಪುರಸ್ಕಾರಗಳನ್ನು ಪಡೆದ ಕುಮಾರಿ ಸಂಧ್ಯಾ ಎನ್. ಮಣಿನಾಲ್ಕೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶೈಕ್ಷಣಿಕ ಸೇವಾ ಯೋಜನೆಯಡಿ ಒಟ್ಟು 175 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಟ್ರಸ್ಟ್ ಸದಾ ಬದ್ಧವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಸೇವಾ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದ ಮುದಿಮಾರದ ಶ್ರೀ ಕಟೀಲೇಶ್ವರಿ ಭಜನಾ ಮಂಡಳಿಯ ಸದಸ್ಯರು ಕುಣಿತ ಭಜನೆಯ ಮೂಲಕ ಭಕ್ತಿಪರ ವಾತಾವರಣ ನಿರ್ಮಿಸಿದರು.

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.)ನ ಉಪಾಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಕಕ್ಯಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಸುಮಲತಾ ಕುಂಟಾಲಪಲ್ಕೆ ಸ್ವಾಗತಿಸಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶ್ಯಾಮಲಾ ಜಿ. ಕುಳಾಯಿ ಪುಸ್ತಕ ವಿತರಣೆ ವರದಿಯನ್ನು ವಾಚಿಸಿದರು. ಶ್ರೀಮತಿ ಲತಾ ಡಿ. ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಹರಿಣಾಕ್ಷಿ ಅಚ್ಚುಕಟ್ಟಾಗಿ ನಿರೂಪಿಸಿದರು.

ಸಮಾಜ ಸೇವೆ, ಶಿಕ್ಷಣ ಪ್ರೋತ್ಸಾಹ ಹಾಗೂ ಜನಸೇವೆಯ ಉದ್ದೇಶದೊಂದಿಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ಕೈಗೊಂಡ ಈ ಕಾರ್ಯಕ್ರಮ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು.

Leave a Reply

Your email address will not be published. Required fields are marked *