Breaking
3 Jun 2026, Wed

ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ 46ನೇ ವಾರ್ಷಿಕ ಮಹಾಸಭೆ ಮತ್ತು ವಾರ್ಷಿಕೋತ್ಸವ ಸಂಭ್ರಮ

ಬಿ.ಸಿ.ರೋಡ್: ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ 46ನೇ ವಾರ್ಷಿಕ ಮಹಾಸಭೆಯು ಪೊಸಳ್ಳಿ ಕುಲಾಲ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಬಿ. ರಮೇಶ್ ಸಾಲಿಯಾನ್ ಸಂಚಯಗಿರಿ ಅವರ ಅಧ್ಯಕ್ಷತೆಯಲ್ಲಿ ಆದಿತ್ಯವಾರ ಬೆಳಿಗ್ಗೆ ನಡೆಯಿತು.

ಮಧ್ಯಾಹ್ನ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್‌ನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಎಂ.ಪಿ. ವರ್ಷ ಮೈಸೂರು, ಜಿಲ್ಲಾ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು., ನಿವೃತ್ತ ಡೆಪ್ಯೂಟಿ ಬಿಎಸ್‌ಎಫ್ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಕುಲಾಲ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ಕುಲಾಲ ಯುವವೇದಿಕೆಯ ಅಧ್ಯಕ್ಷ ಸುಮಿತ್ ಸೊರ್ನಾಡು ಹಾಗೂ ಕರ್ನಾಟಕ ರಾಜ್ಯ ಕರಾವಳಿ ಕುಲಾಲ ಕುಂಬಾರರ ಮಹಿಳಾ ಸಂಘದ ಅಧ್ಯಕ್ಷೆ ವಸಂತಿ ಭೋಜ ಸಾಲಿಯಾನ್ ಆಗಮಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಆಶಾ ಗಿರಿಧರ್ ಹಾಗೂ ಸೇವಾದಳಪತಿ ಜಯಂತ ಕುಲಾಲ್ ಅಗ್ರಬೈಲು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದ ಜ್ಞಾನಶ್ರೀ ಅರಳ, ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 4ನೇ ರ್‍ಯಾಂಕ್ ಪಡೆದ ಮನ್ವಿತಾ, ಬಾಲಕಿಯರ ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ 10ನೇ ಸ್ಥಾನ ಪಡೆದ ಕೃತಿ ಎನ್.ಬಿ.ಪಿ. ಹಾಗೂ ಕರಾಟೆಯಲ್ಲಿ ರಾಜ್ಯ ಮಟ್ಟದ ಪ್ರಥಮ ಸ್ಥಾನ ವಿಜೇತೆ ಸಾನ್ವಿ ಕೆ. ಅವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಡಾಕ್ಟರೇಟ್ ಪದವೀಧರೆ ಡಾ. ಬಬಿತಾ ಗಣೇಶ್, ಚಿತ್ರಕಲಾ ಕಲಾವಿದೆ ಸುಕನ್ಯಾ ಸೌತೆಬಳ್ಳಿ ಹಾಗೂ ಟೇಬಲ್ ಟೆನ್ನಿಸ್‌ನಲ್ಲಿ ರಾಜ್ಯಮಟ್ಟದಲ್ಲಿ 4ನೇ ಸ್ಥಾನ ಪಡೆದ ಸುಶ್ಮಿತಾ ಸೋಮನಾಥ್ ಅವರನ್ನು ಗೌರವಿಸಲಾಯಿತು. ಸಹಕಾರಿ ಇಲಾಖೆಯಲ್ಲಿ ಸ್ವಯಂ ನಿವೃತ್ತಿ ಹೊಂದಿದ ಪ್ರಥಮ ದರ್ಜೆ ಸಹಾಯಕಿ ಜಲಜಾಕ್ಷಿ ಕುಲಾಲ್ ಪಾಣೆಮಂಗಳೂರು ಅವರಿಗೆ ‘ಅಮೂಲ್ಯ ರತ್ನ’ ಪ್ರಶಸ್ತಿ ನೀಡಲಾಯಿತು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಪ್ರೇಮನಾಥ ನೇರಂಬೋಳು, ಕೃತಿಕ್ ಕುಮಾರ್ ವೈ.ಎಸ್. ಹಾಗೂ ವೈಷ್ಣವಿ ವೈ.ಕೆ. ಅವರಿಂದ ಗಾನ ಸಂಭ್ರಮ ನಡೆಯಿತು. ಸಂಜೆ ಕಟೀಲು ಮೇಳದ ಕಲಾವಿದ ಅಶ್ವಥ್ ಕುಲಾಲ್ ಮಂಜನಾಡಿ ಅವರ ನೇತೃತ್ವದಲ್ಲಿ ಕುಲಾಲ ಸಮಾಜ ಬಾಂಧವರಿಂದ ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ಜರುಗಿತು.

ಡ್ಯಾನ್ಸ್ ಕೋರಿಯೋಗ್ರಾಫರ್ ಮಹೇಶ್ ಕುಲಾಲ್ ಕಡೇಶಿವಾಲಯ, ತಾರನಾಥ ಮೊಡಂಕಾಪು, ಹರಿಣಾಕ್ಷಿ ಮೊಡಂಕಾಪು, ರಾಜೇಶ್ ಕುಮಾರ್ ರಾಯಿ ಕಾರ್ಯಕ್ರಮ ನಿರೂಪಿಸಿದರು.

ಪ್ರಧಾನ ಕಾರ್ಯದರ್ಶಿ ಯಾದವ ಅಗ್ರಬೈಲು ಸ್ವಾಗತಿಸಿದರು. ಮಹಿಳಾ ಘಟಕದ ಸದಸ್ಯರು ಪ್ರಾರ್ಥಿಸಿದರು. ಮಚ್ಚೇಂದ್ರ ಸಾಲಿಯಾನ್, ದೇವದಾಸ ಅಗ್ರಬೈಲು, ರಾಘವೇಂದ್ರ ಕಾಮಾಜೆ, ಗಣೇಶ್ ಕುಲಾಲ್ ಬೆದ್ರಗುಡ್ಡೆ, ಮೀನಾಕ್ಷಿ ಪದ್ಮನಾಭ, ಸತೀಶ್ ಸಂಪಾಜೆ, ಯೋಗೀಶ್ ಮಿತ್ತಬೈಲು, ರಮೇಶ್ ಸಾಲಿಯಾನ್ ಕೈಕುಂಜೆ, ಜಯಂತ ಬಂಗೇರ ವಗ್ಗ ಹಾಗೂ ಪ್ರೇಮ ಪೊಸಳ್ಳಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *