ಮೂಡುಬಿದಿರೆ: ‘ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್’ (ರಿ), ಮಿಜಾರು ದ.ಕ. ಕರ್ನಾಟಕ ಇದರ 70ನೇ ಮಾಸಿಕ ಸೇವಾ ಯೋಜನೆಯ ಅಂಗವಾಗಿ ನೆರವು ಹಸ್ತಾಂತರ ಕಾರ್ಯಕ್ರಮ ನಡೆಯಿತು.


ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಪೊಯ್ಯದಪಲ್ಕೆ ನಿವಾಸಿ ಬಬಿತಾ ಅವರ ಪುತ್ರ ಋತ್ವಿಕ್ ಅವರು ಅಪೆಂಡಿಕ್ಸ್ ಸಮಸ್ಯೆಯಿಂದ ಬಳಲುತ್ತಿದ್ದು, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಇತ್ತ, ಅವರ ಮಗಳು ಕೂಡ ಬ್ರೈನ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಕುಟುಂಬದ ಇಬ್ಬರು ಮಕ್ಕಳು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಇದೇ ವೇಳೆ ಕುಟುಂಬದ ತಂದೆಯವರು ಅವರನ್ನು ತೊರೆದಿರುವ ಕಾರಣ, ಕುಟುಂಬಕ್ಕೆ ಯಾವುದೇ ಆದಾಯ ಮೂಲವಿಲ್ಲದೇ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಚಿಕಿತ್ಸೆಯ ಜೊತೆಗೆ ವಿದ್ಯಾಭ್ಯಾಸಕ್ಕೂ ಹೆಚ್ಚಿನ ಹಣದ ಅಗತ್ಯವಿದ್ದು, ಬಡ ಕುಟುಂಬವಾಗಿರುವುದರಿಂದ ಆರ್ಥಿಕ ನೆರವಿಗಾಗಿ ಟ್ರಸ್ಟ್ಗೆ ಮನವಿ ಸಲ್ಲಿಸಿದ್ದರು.

ಈ ಮನವಿಗೆ ಸ್ಪಂದಿಸಿದ ತುಳುನಾಡ ಪೊರ್ಲು ಚಾರಿಟೇಬಲ್ ಟ್ರಸ್ಟ್ ನವರು ಈ ಟ್ರಸ್ಟಿನ ವತಿಯಿಂದ 15,000 ರೂ. ಸಹಾಯಧನದ ಚೆಕ್ ಅನ್ನು ಮೂಡುಬಿದಿರೆಯ ಆದಿಶಕ್ತಿ ಮಾರಿಗುಡಿ ದೇವಸ್ಥಾನದಲ್ಲಿ ಆರ್ಯವರ್ಧನ್ ಭಟ್ ಅವರ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷ ಸಂದೀಪ್ ಮಿಜಾರ್, ಕಾರ್ಯದರ್ಶಿ ದಯಾನಂದ ಮಿಜಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




