ಪುಂಜಾಲಕಟ್ಟೆ: ಬಂಟ್ವಾಳ – ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಪುಂಜಾಲಕಟ್ಟೆ ಬಸವನಗುಡಿ ಎಂಬಲ್ಲಿ ಕೆ.ಎಸ್ ಆರ್.ಟಿ.ಸಿ ಬಸ್ ವೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರು ಗಾಯಗೊಂಡ ಘಟನೆ ನಡೆದಿದೆ.

ಗಾಯಗೊಂಡವರನ್ನು ಸ್ಕೂಟರ್ ಸವಾರರಾದ ಬಡಗಕಜೆಕಾರು ಅಂಚೆ ಕಛೇರಿ ತಾತ್ಕಾಲಿಕ ಪೋಸ್ಟ್ ಮಾಸ್ಟರ್ ಆಗಿರುವ ಬೆಳ್ತಂಗಡಿ ತಾಲೂಕಿನ ಮರೋಡಿಗ್ರಾಮದ ನಿವಾಸಿ ಶ್ರೇಯಸ್ ಹಾಗೂ ಸಹೋದ್ಯೋಗಿ ಶಾಲಿನಿ ಎಂದು ಗುರುತಿಸಲಾಗಿದೆ.

ಶ್ರೇಯಸ್ ಅವರು ಅಂಚೆ ಕಛೇರಿಯ ಕೆಲಸದ ನಿಮಿತ್ತ ಬಸವನಗುಡಿಯಲ್ಲಿರುವ ಪುಂಜಾಲಕಟ್ಟೆ ಅಂಚೆ ಕಛೇರಿಗೆ ಶಾಲಿನಿ ಅವರನ್ನು ಸ್ಕೂಟರ್ ನಲ್ಲಿ ಕುಳ್ಳಿರಿಸಿಕೊಂಡು ಬಸವನಗುಡಿ ಎಂಬಲ್ಲಿರುವ ಅಂಚೆ ಕಛೇರಿಯ ಮುಂಭಾಗ ತಲುಪಿ ಕೇಂದ್ರ ಅಂಚೆ ಕಛೇರಿಗೆ ತೆರಳಲು ಆಕ್ಟಿವಾ ಸ್ಕೂಟರ್ ನ್ನು ಇಂಡಿಕೇಟರ್ ಹಾಕಿ ನಿಲ್ಲಿಸಿದಾಗ ಅವರ ಹಿಂದಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಶ್ರೇಯಸ್ ಹಾಗೂ ಶಾಲಿನಿ ಅವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





