ಬಂಟ್ವಾಳ: ಗ್ರಾಮೀಣ ಭಾಗದ ರೈತರಿಗೆ ವರದಾನವಾಗಿರುವ ಸಜೀಪ ಮುನ್ನೂರು ಹಾಗೂ ಸಜೀಪ ಮೂಡ ಏತ ನೀರಾವರಿ ಯೋಜನೆಗಳ ಪೈಪ್ ಲೈನ್ ವಿಸ್ತರಣೆಗೆ ತಲಾ ರೂ. 23 ಲಕ್ಷ ಅನುದಾನ ಮಂಜೂರಾಗಿದೆ.

ಈ ಎರಡು ಏತ ನೀರಾವರಿ ಯೋಜನೆಗಳು 90 ಹೆಚ್ ಪಿ ಪಂಪ್ ಸೆಟ್ ಗಳ ಮೂಲಕ ರೈತರಿಗೆ ನೆತ್ರಾವತಿ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು ಇದೀಗ ಸ್ಥಳೀಯ ರೈತರ ಬೇಡಿಕೆಯಂತೆ ಹೆಚ್ಚುವರಿ ಜಮೀನುಗಳಿಗೆ 200 ಎಂ.ಎಂ ಪೈಪ್ ಲೈನ್ ಮೂಲಕ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ವಿಸ್ತರಣೆಯಾಗಲಿದೆ.

ಇತ್ತೀಚೆಗೆ ಏತನೀರಾವರಿ ಯೋಜನೆಯ ಫಲಾನುಭವಿಗಳು ಮಾಜಿ ಸಚಿವ ರಮಾನಾಥ ರೈ ಯವರ ನೇತೃತ್ವದಲ್ಲಿ ಸಜೀಪ ಮುನ್ನೂರು ಗ್ರಾಮದ ಮಡಿವಾಳ ಪಡ್ಪು ಕೂಸನಕಟ್ಟೆಯ ಪಂಪ್ ಹೌಸ್ ಬಳಿ ಸಭೆ ನಡೆಸಿ ಏತ ನೀರಾವರಿಯ ಸೌಲಭ್ಯವನ್ನು ವಿಸ್ತರಿಸುವಂತೆ ಬೇಡಿಕೆಯನ್ನು ಮುಂದಿಟ್ಟಿದ್ದರು. ತಕ್ಷಣ ಸ್ಪಂದಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ರೈತರ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು ತ್ವರಿತವಾಗಿ ಅನುದಾನ ಒದಗಿಸುವಲ್ಲಿ ಸಹಕರಿಸಿದ್ದಾರೆ. ರೈತರ ಬೇಡಿಕೆಗೆ ಸಕಾಲದಲ್ಲಿ ಸ್ಪಂದಿಸಿ ಶೀಘ್ರ ಅನುದಾನ ಬಿಡುಗಡೆಗೆ ಸಹಕರಿಸಿದ ಮಾಜಿ ಸಚಿವ ಬಿ. ರಮನಾಥ ರೈಯವರಿಗೆ ಸಜೀಪಮುನ್ನೂರು ಏತನೀರಾವರಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಮಹೇಶ್ ನಾಯಕ್ ಖಂಡಿಗ ಕೃತಜ್ಞತೆ ಸಲ್ಲಿಸಿದ್ದಾರೆ.









