ಉಡುಪಿ: ಕಾಂಗ್ರೆಸ್ ಮುಖಂಡ ಕಾಪು ದಿವಾಕರ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನ ನಡೆಸಿದ್ದ ಇಬ್ಬರು ಅಂತರ್ ರಾಜ್ಯ ಕಳ್ಳರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ತಮಿಳುನಾಡು ರಾಜ್ಯದ ತಿರುನಲ್ವೇಲಿ ತಿರುಕ್ಕುರುಂಕುಡಿಯ ಎಸಾಕ್ಕಿ ರಾಜ (28) ಹಾಗೂ ಆತನ ಸಹಚರ ನಂಬಿ ರಾಜ (23) ಎಂದು ಗುರುತಿಸಲಾಗಿದೆ.

ಕಾಪು ದಿವಾಕರ ಶೆಟ್ಟಿ ಅವರ ಕುಟುಂಬದವರು ಉಳಿಯಾರಗೋಳಿ ಗ್ರಾಮದ ಕೋತಲಕಟ್ಟೆಯಲ್ಲಿರುವ ತಮ್ಮ ಮನೆಗೆ ಬೀಗ ಹಾಕಿ ಮುಂಬೈಗೆ ತೆರಳಿದ್ದರು. ಇದೇ ಸಮಯವನ್ನು ಗಮನಿಸಿದ ಕಳ್ಳರು ಜ. 30 ರಂದು ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಒಡೆದು ಒಳನುಗ್ಗಿದ್ದಾರೆ. ಬಳಿಕ ದೇವರ ಕೋಣೆಯಲ್ಲಿದ್ದ ಹಾಗೂ ಬೆಡ್ರೂಮ್ನ ಕಪಾಟಿನಲ್ಲಿ ಇರಿಸಿದ್ದ ಬೆಳ್ಳಿ ವಸ್ತುಗಳು, 30 ಗ್ರಾಂ ತೂಕದ ಕರಗಿಸಿದ ಗಟ್ಟಿ ಚಿನ್ನ, ವಾಚ್ ಮತ್ತು ನಗದು ಸೇರಿ ಒಟ್ಟು 19,05,000 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಳಿಕ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳ ವಿರುದ್ಧ ಕೇರಳ ಮತ್ತು ತಮಿಳುನಾಡು ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.





