ಮೂಡಬಿದಿರೆ: ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಡಬ್ಲ್ಯೂ. ಡಬ್ಲ್ಯೂ.ಎಫ್( WWF) ಇಂಡಿಯಾ ಸಹಯೋಗದಲ್ಲಿ ನಡೆಸಲಾದ ” ಮಿಷನ್ ಪ್ರಕೃತಿ ಇಂಡಿಯಾ” ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿಸಿ ಅಳಿಯೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಜ್ಯಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಫೆ. 23 ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಾಲಾ ತಂಡ ಹಾಗೂ ಶಿಕ್ಷಕರು ಭಾಗವಹಿಸಿ ಪ್ರಶಸ್ತಿಯನ್ನು ಸ್ವೀಕರಿಸಿದರು.
“ಮಿಷನ್ ಪ್ರಕೃತಿ – ತರಗತಿಯಿಂದ ಸಂರಕ್ಷಣೆಯತ್ತ” ಎಂಬ ಉದ್ದೇಶದಡಿ ರೂಪುಗೊಂಡ ಈ ಕಾರ್ಯಕ್ರಮ ನಾಲ್ಕು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ಏಕೈಕ ಶಾಲೆಯಾಗಿ ಹೆಗ್ಗಳಿಕೆ ಪಡೆದಿದೆ.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ, ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಳ್ಕರ್, WWF ಇಂಡಿಯಾದ ಸಿ.ಇ.ಒ ಕರಣ್ ಭಲ್ಲಾ , ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.







