ಉಡುಪಿ: ವಸತಿಗೃಹವೊಂದರಲ್ಲಿ ವ್ಯಕ್ತಿಯೊಬ್ಬರು ಕುಳಿತ ಕುರ್ಚಿಯಲ್ಲಿಯೇ ಸಾವನಪ್ಪಿರುವ ಘಟನೆ ಉಡುಪಿಯ ಹಳೆ ಸರಕಾರಿ ಬಸ್ಸು ನಿಲ್ದಾಣದ ಬಳಿ ಇರುವ ವಸತಿಗೃಹದಲ್ಲಿ ನಡೆದಿದೆ.
ಮೃತರನ್ನು ದಾವಣಗೆರೆಯ ನಿವಾಸಿ ಮಹಾಂತೇಶ ಎಂ ಜಿ ಎಂದು ಗುರುತಿಸಲಾಗಿದೆ.

ವ್ಯಕ್ತಿಯು ಕೊಠಡಿಯಿಂದ ಹೊರಬಾರದಿರವುದನ್ನು ಗಮನಿಸಿದ ಲಾಡ್ಜಿನ ಸಿಬ್ಬಂದಿ ಸಂಶಯಪಟ್ಟು ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ. ಈ ವ್ಯಕ್ತಿ ಮನೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಬಂದಿದ್ದರೆಂದು ತಿಳಿದುಬಂದಿದೆ.

ನಗರ ಪೋಲಿಸ್ ಠಾಣೆಯ ಎಸ್ ಐ ನಾರಾಯಣ, ಎ ಎಸ್ ಐ ಹರೀಶ್, ಹೆಡ್ ಕಾನ್ ಸ್ಟೇಬಲ್ ಆಶಾಲತಾ ಅವರು ಮೃತನ ಹೆಂಡತಿ, ಹಾಗೂ ಅಣ್ಣನ ಸಮಕ್ಷಮದಲ್ಲಿ ಕಾನೂನು ಪ್ರಕ್ರಿಯೆಯನ್ನು ನಡೆಸಿದರು.

ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲು ಸಹಕರಿಸಿದರು. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.






