ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ಬೀದಿ ನಾಯಿ ಶೆಲ್ಟರ್ ನಿರ್ಮಾಣಕ್ಕೆ ವಿರೋಧಿಸಿ ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿದರು.

ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ನಿಯಂತ್ರಣಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಉಪ್ಪೂರಿನಲ್ಲಿ 9 ಎಕರೆ ಪ್ರದೇಶದಲ್ಲಿ ಬೀದಿನಾಯಿಗಳ ಶೆಲ್ಟರ್ ನಿರ್ಮಾಣಕ್ಕೆ ಮುಂದಾಗುವ ಮೂಲಕ ಸುಮಾರು 18 ಸಾವಿರ ಬೀದಿ ನಾಯಿಗಳನ್ನು ಸಾಕುವ ವ್ಯವಸ್ಥೆಗೆ ಜಿಲ್ಲಾಡಳಿತ ಮುಂದಾಗಿತ್ತು. ಇದಕ್ಕೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಈ ವೇಳೆ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಉಪ್ಪೂರು ಗ್ರಾಮದ ನಿವಾಸಿಗಳು ಗ್ರಾಮದಲ್ಲಿ ಹತ್ತಾರು ಎಕರೆ ಸರಕಾರಿ ಭೂಮಿ ಇದೆ. ನಮ್ಮೂರಿಗೆ ಬೀದಿನಾಯಿ ಶೆಲ್ಟರ್ ಬೇಡ. ಮಹಾನಗರ ಪಾಲಿಕೆಯಾದಾಗ ನಮ್ಮ ಊರು ಅಭಿವೃದ್ಧಿಯಾಗುತ್ತೆ. ಬೀದಿ ನಾಯಿಗಳ ಶೆಲ್ಟರ್ ನಿರ್ಮಾಣ ಮಾಡಿದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಉಪ್ಪೂರು ನಗರ ಪ್ರಾಧಿಕಾರದಿಂದ ನೋಟಿಫೈಡ್ ಆಗಿದೆ.

ಊರಿಗೆ ಬರಬೇಕಾಗಿದ್ದ ವಿಶ್ವವಿದ್ಯಾಲಯ ಉಪವಿಭಾಗ ರದ್ದಾಗಿದೆ. ಪೊಲೀಸ್ ಕ್ವಾಟ್ರಸ್, ಕಾಲೇಜುಗಳು ಕೂಡಾ ರದ್ದಾದವು. ಆದರೆ ನಮ್ಮೂರಲ್ಲಿ ಬೀದಿ ನಾಯಿ ಶೆಲ್ಟರ್ ಮಾಡ್ತಾರಂತೆ. ಗ್ರಾಮದ ನೆಮ್ಮದಿ ಕೆಡಿಸುವ ಬೀದಿ ನಾಯಿ ಶೆಲ್ಟರ್ ಬೇಡ. ಒಂದೇ ಪರಿಸರದಲ್ಲಿ ಸಾವಿರಾರು ನಾಯಿಗಳು ಬರುವುದರಿಂದ ಗ್ರಾಮದ ನೆಮ್ಮದಿ ನಾಶವಾಗುತ್ತದೆ. ನಮ್ಮದು ಕುಗ್ರಾಮವಲ್ಲ ಅಭಿವೃದ್ಧಿಗೆ ಅವಕಾಶ ಇರುವ ಗ್ರಾಮ. ಶೆಲ್ಟರ್ ನಿರ್ಮಾಣ ಬಗ್ಗೆ ಗ್ರಾಮ ಪಂಚಾಯತ್ ಗೂ ಯಾವುದೇ ಮಾಹಿತಿ ನೀಡಿಲ್ಲ.

ಉಪ್ಪೂರು ಗ್ರಾಮದ ಬಡ ಜನರಿಗೆ ಭೂಮಿ ಕೊಡಿ, ಹಕ್ಕುಪತ್ರ ಕೊಡಿ. ಮೊದಲು ಜನರ ಕಾಳಜಿ ನಂತರ ನಾಯಿ ಶೆಲ್ಟರ್ ಮಾಡಿ. ಬೀದಿ ನಾಯಿ ಶೆಲ್ಟರ್ ಯೋಜನೆ ಬೇರೆ ನಿರ್ಜನ ಪ್ರದೇಶಕ್ಕೆ ವರ್ಗಾವಣೆ ಮಾಡಿ ಎಂದು ಒತ್ತಾಯಿಸಿದರು.





