ಮೂಡಬಿದ್ರೆ: ಈ ಪ್ರಪಂಚದಲ್ಲಿ ಮನುಷ್ಯನಾಗಿ ಹುಟ್ಟಿದ ಮೇಲೆ ಕೆಲವೊಂದು ಮಾನವೀಯ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ಮಾತ್ರವಲ್ಲ ಇಲ್ಲಿ ನಮಗಾಗಿ ನಾವು ಬದುಕುವುದರ ಜೊತೆಗೆ ಸಮಾಜಮುಖಿಯಾಗಿ, ಪರೋಪಕಾರಿಯಾಗಿ ಬಾಳಿ ಬದುಕಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ.

ಅಂತಹ ಸಾರ್ಥಕ ಜೀವನ ನಡೆಸುತ್ತಿರುವ ನಿಸ್ವಾರ್ಥ ವ್ಯಕ್ತಿಯ ಹೆಸರು ಆನಂದ್ ಕುಲಾಲ್ ಮೂಡಬಿದ್ರೆಯ ವಿಶಾಲನಗರ ನಿವಾಸಿ. ಇವರು ಕಳೆದ 24 ವರ್ಷಗಳಿಂದ ಹೋಟೆಲ್ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಗೂಡಂಗಡಿ, ಕ್ಯಾಂಟಿನ್ ನಡೆಸಿಕೊಂಡು ಬರುತ್ತಿದ್ದರು. ಪ್ರಸ್ತುತ ಇವರು 14 ವರ್ಷಗಳಿಂದ ಮೂಡಬಿದ್ರೆಯಲ್ಲಿ ಶ್ರೀ ಗಣೇಶ್ ಅನ್ನುವ ಹೆಸರಿನಲ್ಲಿ ತಮ್ಮ ಸ್ವಂತ ಕ್ಯಾಂಟೀನ್ ನನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಮಾತ್ರವಲ್ಲ ನೇತಾಜಿ ಬ್ರಿಗೇಡ್ (ರಿ) ಮೂಡುಬಿದಿರೆ ಇದರಲ್ಲಿ ಗೌರವಾಧ್ಯಕ್ಷರಾಗಿಯೂ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಈ ವೇಳೆ ಸಮಾಜದಲ್ಲಿ ದುಡಿಯಲು ಅಶಕ್ತರಾದ ವೃದ್ಧರ , ಅಂಗವಿಕಲರ ಪರಿಸ್ಥಿತಿಯನ್ನು ಗಮನಿಸುತ್ತಾರೆ. ನಂತರ ಆನಂದ ಅವರು ವೃದ್ಧರಿಗೆ ಮತ್ತು ಅಂಗವಿಕಲರಿಗೆ ಉಚಿತವಾಗಿ ಊಟೋಪಹಾರ ನೀಡಲಾಗುತ್ತದೆ ಅನ್ನುವ ಸೇವೆಯ ಮಾಹಿತಿಯನ್ನು ತಮ್ಮ ಕ್ಯಾಂಟಿನ್ ನ ಎದುರಿನ ಬೋರ್ಡಿನಲ್ಲಿ ಬರೆದುಕೊಂಡಿದ್ದಾರೆ. ಮಕರ ಸಂಕ್ರಮಣದಿಂದ ಈ ಉಚಿತ ಊಟೋಪಹಾರ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದು ಇವರ ಈ ಸಾಮಾಜಿಕ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಪ್ರಶಂಸೆಗಳ ಮಹಾಪೂರವೇ ಹರಿದು ಬರ್ತಾ ಇದೆ.

ಇನ್ನು ಜ.31 ರಂದು ಮೂಡಬಿದಿರೆಯಲ್ಲಿ 23ನೇ ವರ್ಷದ ಕೋಟಿ ಚೆನ್ನಯ ಕಂಬಳ ನಡೆಯಲಿದ್ದು ಅನಾರೋಗ್ಯದಿಂದ ಬಳಲುತ್ತಿರುವ ಮೂಡಬಿದಿರೆಯ ನಿವಾಸಿಗಳಾದ 9 ವರ್ಷದ ಅದ್ವಿತ್ ದೇವಾಡಿಗ ಮತ್ತು 35 ವರ್ಷದ ಅಕ್ಷತಾ ಕುಮಾರಿ ಅವರ ವೈದ್ಯಕೀಯ ವೆಚ್ಚದ ಸಹಾಯ ನಿಧಿಗಾಗಿ ನೇತಾಜಿ ಬ್ರಿಗೇಡ್ (ರಿ) ಮೂಡಬಿದ್ರೆಯ ತಂಡ ಆ ಕಂಬಳಕ್ಕೆ ಬರಲಿದ್ದು ಎಲ್ಲರು ಧನ ಸಹಾಯ ಮಾಡುವ ಮೂಲಕ ಸಹಕಾರ ನೀಡಿ ಎಂದು ಆನಂದ್ ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡಿದ್ದಾರೆ.



