ಮಂಗಳೂರು : ಸ್ಥಾನಿಕ ಬ್ರಾಹ್ಮಣ ಮಹಾಮಂಡಲ ಮಂಗಳೂರು ಅಂತಾರಾಷ್ಟ್ರೀಯ ಮಟ್ಟದ ಸ್ಥಾನಿಕ ಸಂಘಗಳು ಮತ್ತು ಸಂಪನ್ಮೂಲ ವ್ಯಕ್ತಿ ಗಳು ಒಕ್ಕೂಟದ ಆಯೋಜನೆಯಲ್ಲಿ ಪುತ್ತೂರು ಶಿವಬ್ರಾಹ್ಮಣ ಸಮಾಜ ಸೇವಾ ಸಂಘದ ಆತಿಥ್ಯ ದಲ್ಲಿ ಎರಡು ದಿನಗಳ ಕಾಲ ಕಲ್ಲಾರೆ ಶಿವಕೃಪಾ ಸಭಾಭವನದಲ್ಲಿ ಸ್ಥಾನಿಕ ಬ್ರಾಹ್ಮಣ ಜಾಗತಿಕ ಸಮಾವೇಶ ಜರುಗಿತು.

ಮೊದಲನೆ ದಿನದ ಸಮಾವೇಶದಲ್ಲಿ ಸಮಾಜ ಸಂಘಟನೆ ಹಾಗೂ ಅಭಿವೃದ್ಧಿಯಲ್ಲಿ ಯುವಜನತೆಯ ಹೊಣೆ ಎನ್ನುವ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಿತು.
ಡಾ.ಶಾಂತಾ ಪುತ್ತೂರು ಶಿವ ಬ್ರಾಹ್ಮಣ ಯುವಸಂಘಟನೆಗಳು ಸಮುದಾಯದ ಶೈಕ್ಷಣಿಕ ಹಾಗೂ ನೈತಿಕ ಏಳಿಗೆ ಕಡೆಗೆ ಗಮನ ಹರಿಸಬೇಕಾಗಿದೆ. ಧಾರ್ಮಿಕ ಸಾಮಾಜಿಕ ಕಾರ್ಯಗಳಿಗೆ ಹೆಚ್ಚು ಸಮಯ ನೀಡಬೇಕಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ರಂಜನ್ ಬೆಳ್ಳರ್ಪಾಡಿಯವರು ಶಿವ ಬ್ರಾಹ್ಮಣ ಸದಸ್ಯತ್ವ ದ ಕಡೆಗೆ ಕರೆಕೊಟ್ಟರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಡಾ.ಗೀತಾಕುಮಾರಿ ಪುತ್ತೂರು ಸಂಘಟನೆಯಲ್ಲಿ ಸ್ತ್ರೀಯರ ಪಾತ್ರ ಮತ್ತು ಕುಟುಂಬ ಸಾಮರಸ್ಯದ ಕುರಿತು ಮಾತನಾಡಿದರು. ಕಮಾಂಡರ್ ಅಶ್ವಿನ್ ಎಂ.ರಾವ್ ರವರು ಸೇನೆಯ ಮೌಲ್ಯ ಗಳನ್ನು ಸಮಾಜ ಸಂಘಟನೆಯಲ್ಲಿ ಹೇಗೆ ಅಳವಡಿಸಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಎನ್.ಕೆ.ಜಗನ್ನಿವಾಸ ರಾವ್ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು. ಸ್ಥಾನಿಕ ಬ್ರಾಹ್ಮಣ ಮಹಾಮಂಡಲ (ರಿ)ಮಂಗಳೂರು ಇದರ ಅಧ್ಯಕ್ಷ ರಾದ ಶ್ರೀ ಕೆ ಮಂಜುನಾಥ ಹೆಬ್ಬಾರ್ ಗೋಷ್ಠಿ ಯ ಸಂಪನ್ಮೂಲ ವ್ಯಕ್ತಿ ಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು.



