ಬಂಟ್ವಾಳ: ಪುತ್ರಿಯನ್ನು ಬಿಟ್ಟು ಪುತ್ರನನ್ನು ಕರೆದೊಯ್ದು ದಂಪತಿ ನಾಪತ್ತೆಯಾದ ಘಟನೆ ಬಂಟ್ವಾಳದ ಮೂಡುನಡುಗೋಡು ಗ್ರಾಮದಲ್ಲಿ ನಡೆದಿದೆ.
ಮೂಲತಃ ನಾವೂರ ಗ್ರಾಮದ ನಿವಾಸಿಗಳಾದ ಸದಾಶಿವ (45) ಮತ್ತು ಅವರ ಪತ್ನಿ ಪ್ರತಿಭಾ (39) ಹಾಗೂ ಅವರ ಮಗ ರಿತ್ವಿಕ್ (9) ಕಾಣೆಯಾದವರು.

ಡಿಸೆಂಬರ್ 17 ರಂದು ಮೂವರು ಕಾಣೆಯಾಗಿದ್ದು ಈ ಬಗ್ಗೆ ಡಿಸೆಂಬರ್ 25 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದ್ರೆ ಈವರೆಗೂ ಕುಟುಂಬದ ಪತ್ತೆಯಾಗಿಲ್ಲ.
ಈ ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಿದ್ದು, ಈ ನಾಲ್ಕು ಮಂದಿ ಡಿಸೆಂಬರ್ 16 ರಂದು ಮೂಡನಡುಗೋಡು ಗ್ರಾಮದ ಶಾಂತಿಗುರಿಯಲ್ಲಿರುವ ಸಂಬಂಧಿಕರಾದ ಧರ್ಣಪ್ಪ ಪೂಜಾರಿ ಅವರ ಮನೆಗೆ ಬಂದಿದ್ದರು. ಆ ದಿನ ಅಲ್ಲೇ ಉಳಿದುಕೊಂಡಿದ್ದ ಅವರು ಮರುದಿನ ಮುಂಜಾನೆ ವೇಳೆಗೆ ಮಗಳನ್ನು ತಂಗಿ ಮನೆಯಲ್ಲಿ ಬಿಟ್ಟು ಸದಾಶಿವ ಮತ್ತು ಪತ್ನಿ ಪ್ರತಿಭಾ ಹಾಗೂ ಮಗ ರಿತ್ವಿಕ್ ಸಹಿತ ಮೂವರು ಕಾಣೆಯಾಗಿದ್ದಾರೆ.

ಮಗಳನ್ನು ಬಿಟ್ಟು ಕಾಣೆಯಾದ ಈ ಕುಟುಂಬದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದು, ಅವರನ್ನು ಪತ್ತೆ ಮಾಡಿಕೊಡುವಂತೆ ಧರ್ಣಪ್ಪ ಪೂಜಾರಿ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಾಣೆಯಾದ ಮೂವರು ತುಳು, ಕನ್ನಡ ಭಾಷೆ ತಿಳಿದಿದ್ದು, ಅವರ ಗುರುತು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಸಂಪರ್ಕ ಮಾಡುವಂತೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.



