ಉಡುಪಿ: ರಾತ್ರಿಯ ವೇಳೆ ಟ್ಯಾಂಕರ್ ಚಾಲಕನೊಬ್ಬ ಮದ್ಯಪಾನ ಮಾಡಿ ಹೆಡ್ ಲೈಟ್ ಕೂಡ ಹಾಕದೆ ಯರ್ರಾಬಿರ್ರಿಯಾಗಿ ವಾಹನ ಚಲಾಯಿಸಿದ ಘಟನೆ ಉಡುಪಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಟ್ಯಾಂಕರ್ ಚಾಲಕ ಮಹಾರಾಷ್ಟ್ರ ಮೂಲದವನು ಎಂದು ಗುರುತಿಸಲಾಗಿದೆ.
ಯರ್ರಾಬಿರ್ರಿಯಾಗಿ ವಾಹನ ಚಲಾಯಿಸಿದ ಚಾಲಕನನ್ನು ಸಾರ್ವಜನಿಕರು ಹಿಂಬಾಲಿಸಿ ಅಂಬಲಪಾಡಿ ಬಳಿ ನಿಲ್ಲಿಸಿದ್ದಾರೆ. ಈ ವೇಳೆ ಅಸಮಾಧಾನಗೊಂಡ ಕೆಲವು ಸಾರ್ವಜನಿಕರು ಚಾಲಕನ ಮೇಲೆ ಹಲ್ಲೆ ನಡೆಸಿದರೆಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿದ ವಿಶು ಶೆಟ್ಟಿ ಅವರು ಚಾಲಕನನ್ನು ಸಾರ್ವಜನಿಕರ ಹಲ್ಲೆಯಿಂದ ರಕ್ಷಿಸಿ, ಕೂಡಲೇ ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ನಂತರ ವಿಶು ಶೆಟ್ಟಿ, ಮತ್ತೊಬ್ಬ ಚಾಲಕರ ಸಹಾಯದಿಂದ ರಸ್ತೆ ಮಧ್ಯದಲ್ಲಿ ನಿಂತಿದ್ದ ಟ್ಯಾಂಕರ್ನ್ನು ಸುರಕ್ಷಿತವಾಗಿ ಠಾಣೆಗೆ ಕರೆದೊಯ್ಯುವಲ್ಲಿ ನೆರವಾದರು.
ಚಾಲಕನ ನಿರ್ಲಕ್ಷ ತನದಿಂದ ಯಾವುದೇ ರೀತಿಯಾದಂತಹ ಅವಘಡಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.




