Breaking
23 Mar 2026, Mon

27 ವರ್ಷಗಳಿಂದ ಬಾಯಿಲ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಶಿಕ್ಷಕಿ ಜೆಸಿಂತಾ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ

ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಬಾಯಿಲ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇಲಾಖೆಯ ನಿಯಮದ ಪ್ರಕಾರ ಬೇರೆ ಶಾಲೆಗೆ ವರ್ಗಾವಣೆಗೊಂಡ ಶಿಕ್ಷಕಿ ಜೆಸಿಂತಾ ಪ್ಲೇವಿ ಮಸ್ಕರೇನಸ್ ರವರ ಬೀಳ್ಕೊಡುಗೆ ಕಾರ್ಯಕ್ರಮ ನ. 23ರಂದು ನಡೆಯಿತು.

ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಕಿಯ ಸೇವೆಯನ್ನು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಲಕ್ಷ್ಮೀ ವಹಿಸಿದ್ದರು.

ಶಾಲಾ ಹಿರಿಯ ವಿದ್ಯಾರ್ಥಿಗಳು ಸೇರಿ ಗುರುವಿಗೆ ಗುರುದಕ್ಷಿಣೆಯಾಗಿ ಶಾಲೆಯಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ಶಿಬಿರವನ್ನು ಮಾಡುವುದರ ಮೂಲಕ ಸೇವಾ ಕಾರ್ಯವನ್ನು ಮಾಡಿ ಅದ್ದೂರಿಯಾಗಿ ಬೀಳ್ಕೊಟ್ಟರು.

ಮಂಗಳೂರಿನ ಎ .ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕುಂಟಿಕಾನ ಮಂಗಳೂರು ಇವರಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ಇಂಡಿಯನ್ ರೆಡ್ಕ್ರಾಸ್ ಬ್ಲಡ್ ಸೆಂಟರ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಈ ಸಂದರ್ಭ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಓದು ಜ್ಞಾನಕ್ಕೆ ದಾರಿ, ಜ್ಞಾನ ಬದುಕಿಗೆ ಬೆಳಕು ಎಂಬ ಮಾತಿನಂತೆ ಶಿಕ್ಷಕಿ ಜೆಸಿಂತಾ ರವರು ಬಾಯಿಲ ಶಾಲೆವೆಂಬ ಪುಟ್ಟ ವಿದ್ಯಾ ದೇಗುಲದಲ್ಲಿ 27 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣಾಮೃತವನ್ನು ಉಣಪಡಿಸಿ ಪರಿಸರದಲ್ಲಿ ಅತ್ಯುತ್ತಮ ಶಿಕ್ಷಕಿಯಾಗಿ ಶಾಲೆ ಹಾಗೂ ಇಲಾಖೆಯ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದು ಒಳ್ಳೆಯ ವ್ಯಕ್ತಿಗಳನ್ನು ರೂಪಿಸುವಲ್ಲಿ ಮೆಟ್ಟಿಲಾಗಿ ನಿಂತವರು ಎಂದು ಹೇಳಿದರು.

ವರ್ಗಾವಣೆ ಗೊಳ್ಳುತ್ತಿರುವ ಶಿಕ್ಷಕಿಗೆ ಬಾಯಿಲ ಶಾಲೆಯ ಶಾಶ್ವತ ನೆನಪಿಗಾಗಿ ಶಾಲಾ ಕಟ್ಟಡದ ಮಾದರಿಯನ್ನು ರಚಿಸಿ ಉಡುಗೊರೆಯಾಗಿ ನೀಡಲಾಯಿತು.

ಗೌರವ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಶಿಕ್ಷಕಿ ಜೆಸಿಂತಾ ತನ್ನ ಸುದೀರ್ಘ ಸಮಯದ ಸೇವೆಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸಿದರು, ಶಾಲೆಗೆ ಕರ್ತವ್ಯಕ್ಕೆ ಸೇರಿದ ದಿನದಿಂದ ನಡೆದು ಬಂದ ಪ್ರತಿಯೊಂದು ಅನುಭವದ ಬುತ್ತಿಯನ್ನು ತಮ್ಮ ಮಾತಿನ ಮೂಲಕ ತೆರೆದಿಟ್ಟರು. ಶಿಕ್ಷಕ ವೃತ್ತಿಯು ಕೇವಲ ಶಿಕ್ಷಣವನ್ನು ಒದಗಿಸುವುದಷ್ಟೇ ಅಲ್ಲದೆ ವಿದ್ಯಾರ್ಥಿಗಳ ಮತ್ತು ಪೋಷಕ ಸಮುದಾಯದ ನೆರವು ದೊರೆತಾಗ ಅವರ ಜೊತೆಗಿನ ಸಂಬಂಧವು ಗಟ್ಟಿಯಾಗಿ ಬೆಳೆಯಲು ಸಾಧ್ಯ, ಈ ಪ್ರಕಾರವಾಗಿ ತಮ್ಮ ಕರ್ತವ್ಯದ ದಿನಗಳಲ್ಲಿ ಅವರ ಜೊತೆ ಒಡನಾಟದ ಸಂಬಂಧವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಗೆ ಉಚಿತವಾಗಿ ತರಕಾರಿ ಪೂರೈಸುತ್ತಿರುವ ಮೆಲ್ಕಾರ್ ಚಂದ್ರಿಕಾ ವೆಜಿಟೇಬಲ್ ಮಾಲಕ ಶರೀಫ್, 45 ಬಾರಿ ರಕ್ತದಾನ ಮಾಡಿದ ಲೋಕೇಶ್ ಸುವರ್ಣ ಬಿಸಿ ರೋಡ್, ಹಾಗೂ ಶಾಲಾ ಗೌರವ ಶಿಕ್ಷಕಿಯವರನ್ನು ಗೌರವಿಸಲಾಯಿತು.

ಅಂಗನವಾಡಿ ಹಾಗೂ ಶಾಲಾ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಭಾ ಕಾರ್ಯದ ಮೊದಲು ಅಂಗನವಾಡಿ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ವೇದಿಕೆಯಲ್ಲಿ ವೀರಕಂಭ ಪಂಚಾಯತ್ ಸದಸ್ಯರಾದ ಲಕ್ಷ್ಮೀ, ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಂಗೇರ, ಕೃಷ್ಣಪ್ಪ ಪೂಜಾರಿ ಕೆಪುಳ ಕೋಡಿ, ಸಂದೀಪ್ ಶೆಟ್ಟಿ ಅರೆಬೆಟ್ಟು, ಜಯಪ್ರಕಾಶ್ ತೆಕ್ಕಿಪಾಪು, ರಮಾನಂದ ಶೆಟ್ಟಿ, ಡಾಕ್ಟರ್ ಗಣೇಶ್ ಚಾರ್ಮಾಡಿ, ಡಾ. ನಾಗಭೂಷಣ್ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ಮಕ್ಕಳ ಪೋಷಕರು, ಶಾಲಾ ಹಿರಿಯ ವಿದ್ಯಾರ್ಥಿಗಳು, ರಾಜೀವ್ ಯುವಕ ಮಂಡಲ ಬಾಯಿಲ, ಎಬಿ ಪ್ರೆಂಡ್ಸ್ ಬಾಯಿಲ, ಯುವಕೇಸರಿ ಫ್ರೆಂಡ್ಸ್ ಅರೆಬೆಟ್ಟು ಇದರ ಸದಸ್ಯರುಗಳು, ಶಿಕ್ಷಕಿಯ ಅಭಿಮಾನಿಗಳು ಪಾಲ್ಗೊಂಡಿದ್ದರು.

ಶಾಲಾ ಮಕ್ಕಳಾದ ಪ್ರತ್ವಿಕ್, ಪ್ರಕೃತಿ, ಲಾಸ್ಯ, ಯೋಕ್ಷಿತ್ ಪ್ರಾರ್ಥಿಸಿ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ವಾರಿಜಾಕ್ಷಿ ಸ್ವಾಗತಿಸಿ, ಹಿರಿಯ ವಿದ್ಯಾರ್ಥಿ ಪ್ರತೀಕ ಅಭಿನಂದನ ಪತ್ರ ವಾಚಿಸಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್ ವಂದಿಸಿದರು. ಶಾಲಾ ಹಿರಿಯ ವಿದ್ಯಾರ್ಥಿಗಳಾದ ನಿರ್ಮಲ ಹಾಗೂ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *