Breaking
23 Mar 2026, Mon

ಗ್ರಾಮ ಪಂಚಾಯತ್ ಮೂಲಕ ನೀಡುವ ವಸತಿ ಯೋಜನೆ ಶೀಘ್ರ ಅನುಷ್ಟಾನಕ್ಕೆ ಪ್ರಭಾಕರ ಪ್ರಭು ಮನವಿ

ಬಂಟ್ವಾಳ : ಗ್ರಾಮೀಣ ಭಾಗದಲ್ಲಿರುವ ವಸತಿ ರಹಿತ ಬಡವರಿಗೆ ವಾಸ್ತವ್ಯದ ಮನೆ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತ್ ಮೂಲಕ ನೀಡುತ್ತಿರುವ ಬಸವ ವಸತಿ ಯೋಜನೆ ಸೇರಿದಂತೆ ವಿವಿಧ ವಸತಿ ಯೋಜನೆಗಳು ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದು ವಸತಿ ರಹಿತ ಕುಟುಂಬಗಳು ಮನೆ ನಿರ್ಮಾಣದ ಸಹಾಯಧನಕ್ಕಾಗಿ ಗ್ರಾಮ ಪಂಚಾಯತಗಳಿಗೆ ಅರ್ಜಿ ಸಲ್ಲಿಸಿ ಕೆಲವು ವರ್ಷಗಳಿಂದ ಮನೆ ನಿರ್ಮಾಣದ ಕನಸು ಕಾಣುತ್ತಿರುವ ಅದೆಷ್ಟೋ ಅರ್ಹ ಬಡಕುಟುಂಬಗಳು “ಸೂರು” ಇಲ್ಲದೇ ಪರಾವಲಂಬನೆಯ ಬದುಕು ಸಾಗಿಸುತ್ತಿದ್ದಾರೆ.

ಗ್ರಾಮ ಪಂಚಾಯತ್ ಗಳಲ್ಲಿ ಜರಗುವ ಗ್ರಾಮ ಸಭೆ , ವಾರ್ಡ್ ಸಭೆಗಳಲ್ಲಿ ವಸತಿ ರಹಿತ ಕುಟುಂಬಗಳಿಂದ ವಿವಿಧ ವಸತಿ ಯೋಜನೆಗಳಿಗೆ ಸಂಬಂದಿತ ದಾಖಲೆಗಳನ್ನು ಪಡೆದುಕೊಂಡು ಮನೆ ಮಂಜೂರಾತಿ ಬಗ್ಗೆ ಭರವಸೆ ಹುಟ್ಟಿಸಿದ ಪರಿಣಾಮವಾಗಿ ಫಲಾನುಭವಿಗಳು ಸದ್ಯದಲ್ಲಿಯೇ ಮನೆ ಮಂಜೂರಾತಿ ಪತ್ರ ಲಭಿಸುವ ನಿರೀಕ್ಷೆಯನ್ನು ಇಟ್ಟುಕೊಂಡು ವರ್ಷಾನುಗಟ್ಟಲೇ ಕಾಲ ಕಳೆದರೂ ಸಹ ವಸತಿ ಯೋಜನೆ ಮಂಜೂರಾತಿಯಾಗದೇ ಜಾತಕ ಪಕ್ಷಿಯಂತೆ ಕಾಲ ಕಳೆಯುತ್ತಿದ್ದಾರೆ.

ಗ್ರಾಮ ಪಂಚಾಯತಿಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಇಲಾಖೆಯಿಂದ ಯಾವುದೇ ಸ್ಪಷ್ಟ ನಿರ್ದೇಶನ ಬಂದಿಲ್ಲ ಎಂದೂ ಸಬೂಬು ಉತ್ತರ ಕೊಟ್ಟು ಫಲಾನುಭವಿಗಳಿಗೆ ಸತಾಯಿಸುತ್ತಿದ್ದಾರೆ.

ಈ ಹಿನ್ನಲೆಯಲ್ಲಿ ಸರಕಾರದ ವಿವಿಧ ಗ್ಯಾರಂಟಿ ಯೋಜನೆಗಳಿಗಿಂತ ಬಡವರಿಗೆ ವಾಸ್ತವ್ಯಕ್ಕೆ ಸೂರು ಕಲ್ಪಿಸುವ ವಸತಿ ಯೋಜನೆಗಳು ಪ್ರಮುಖ ಮೂಲಭೂತ ಸೌಕರ್ಯವಾಗಿರುವುದರಿಂದ ಶೀಘ್ರವೇ ಗ್ರಾಮ ಪಂಚಾಯತ್ ಮೂಲಕ ವಸತಿ ಯೋಜನೆಗೆ ಅನುದಾನ ಒದಗಿಸಿ ಅನುಷ್ಟಾನಕ್ಕೆ ಚಾಲನೆ ನೀಡುವಂತೆ ಕರ್ನಾಟಕ ಸರಕಾರದ ವಸತಿ ಸಚಿವರಿಗೆ ಬಂಟ್ವಾಳ ಮಾಜಿ ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *