ಹಿರಿಯಡ್ಕ: ಪೆರ್ಡೂರು ಅಲಂಗಾರು ಸಮೀಪದ ಮಡಿಸಾಲು ಹೊಳೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಬಾಲಕನನ್ನು ಪೆರ್ಡೂರು ಅಲಂಗಾರು ನಿವಾಸಿ ಶ್ರೀಶಾಂತ್ ಶೆಟ್ಟಿ(15) ಎಂದು ಗುರುತಿಸಲಾಗಿದೆ. ಶ್ರೀಶಾಂತ್ ಶೆಟ್ಟಿ ಹಿರಿಯಡ್ಕ ಖಾಸಗಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದನು.

ನ. 9ರಂದು ಮಧ್ಯಾಹ್ನ ವೇಳೆ ಶ್ರೀಶಾಂತ್ ಶೆಟ್ಟಿ ತನ್ನ ನೆರೆಮನೆಯ ನವೀನ್ ಎಂಬಾತನ ಜೊತೆ ಹೊಳೆಯಲ್ಲಿ ಈಜಲು ಹೋದ ವೇಳೆ ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ.
ಈತನೊಂದಿಗೆ ಈಜಲು ಹೋದ ನವೀನ್, ವಿಷಯವನ್ನು ಮನೆಯಲ್ಲಿ ಹೇಳದೆ ಮುಚ್ಚಿಟ್ಟಿದ್ದು ಬಳಿಕ ಮನೆಯವರು ಹುಡುಕಾಟ ನಡೆಸಿದಾಗ ನ.10 ರಂದು ಸಂಜೆ 5ಗಂಟೆ ಸುಮಾರಿಗೆ ಮಡಿಸಾಲು ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



