ಕಿನ್ನಿಗೋಳಿ : ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಮೃತಪಟ್ಟಿರುವ ಘಟನೆ ಮಂಗಳೂರು ಸಮೀಪದ ಕಿನ್ನಿಗೋಳಿಯಲ್ಲಿ ನಡೆದಿದೆ.
ಮೃತರನ್ನು ನಿಡ್ಡೋಡಿ ಬಂಗೇರ ಪದವು ನಿವಾಸಿ ಪ್ರಸಾದ್ ಪೂಜಾರಿ (33) ಎಂದು ಗುರುತಿಸಲಾಗಿದೆ.

ಬೈಕ್ ಸವಾರ ಕಮ್ಮಾಜೆ ನಿವಾಸಿ, ಮಂಜುನಾಥ ಭಟ್ ಎಂಬವರು ಕಟೀಲು ದೇವಸ್ಥಾನದಲ್ಲಿ ಕೆಲಸ ಮುಗಿಸಿ ತಮ್ಮ ಬೈಕ್ ನಲ್ಲಿ ಮನೆ ಕಡೆ ಬರುತ್ತಿದ್ದಾಗ ಹಿಂಭಾಗದಿಂದ ಕಿನ್ನಿಗೋಳಿ ಕಡೆಯಿಂದ ನಿಡ್ಡೋಡಿ ಬಂಗೇರ ಪದವು ಕಡೆಗೆ ಹೋಗುತ್ತಿದ್ದ ಪ್ರಸಾದ್ ಪೂಜಾರಿ ಎಂಬುವವರ ಬೈಕ್ ಡಿಕ್ಕಿಯಾಗಿದೆ.

ಪರಿಣಾಮ ಪ್ರಸಾದ್ ರವರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



