ಕಾರ್ಕಳ: ತಾಲೂಕಿನ ಮಿಯಾರು ಪ್ರದೇಶದಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಣೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಮಿಯಾರು ನಿವಾಸಿಗಳಾದ ಸತ್ಯೇಂದ್ರ ನಾಯಕ್ (70), ಶ್ರೀಕಾಂತ್ ನಾಯಕ್ (37), ಹಾಗೂ ರಮಾನಂದ ನಾಯಕ್ (48) ಬಂಧಿತರು.

ಗುರುವಾರ ಬೆಳಿಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಮಿಯಾರು ಗ್ರಾಮದ ದೆಂದಬೆಟ್ಟ ಪ್ರದೇಶದಲ್ಲಿ ದಾಳಿ ನಡೆಸಿದ್ದು, ಪರವಾನಗಿ ಇಲ್ಲದೆ ಹಾಗೂ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಹಳೆ ವಾಸದ ಮನೆಯಲ್ಲಿ ಪಟಾಕಿ ದಾಸ್ತಾನು ಮಾಡಿದ್ದರು ಎಂದು ತಿಳಿದು ಬಂದಿದೆ.

ಸುಮಾರು ಮೂರು ಕಂಟೇನರ್ ಗಾತ್ರದಷ್ಟು ಪ್ರಮಾಣದ ಪಟಾಕಿ ಸಂಗ್ರಹವನ್ನು ಪೊಲೀಸರು ಪತ್ತೆಹಚ್ಚಿದ್ದು, ಇದರ ಮೌಲ್ಯ ಸುಮಾರು ಒಂದು ಕೋಟಿಗೂ ಹೆಚ್ಚು ರೂ. ಆಗಿದೆ. ವಿವಿಧ ಬ್ರಾಂಡ್ಗಳ ಪಟಾಕಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.



