ಪುತ್ತೂರು: ವ್ಯಕ್ತಿಯೊಬ್ಬರನ್ನು ಹಲ್ಲೆ ಮಾಡಿದ ಆರೋಪದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಅರಿಯಡ್ಕ ಗ್ರಾಮದ ಕೌಡಿಚಾರ್ನಲ್ಲಿ ಈ ದೌರ್ಜನ್ಯ, ಹಲ್ಲೆ ಪ್ರಕರಣ ನಡೆದಿದೆ. ಘಟನೆಯಲ್ಲಿ ಶ್ರವಣ್ ಎಂಬವರು ಗಾಯಗೊಂಡಿದ್ದು ಹಲ್ಲೆ ನಡೆಸಿದ ಆರೋಪಿಗಳಾದ ಸಂಜನ್ ರೈ ಮತ್ತು ಪ್ರವೀಶ್ ನಾಯರ್ ನ್ನು ಪೊಲೀಸರು ಬಂಧಿಸಿದ್ದಾರೆ.

ಅ. 11, 2025 ರ ರಾತ್ರಿ ಸುಮಾರು 10:30 ಗಂಟೆಯ ವೇಳೆ ನವೀನ್ ಪಿ.ಜಿ. ಅವರ ಜನರಲ್ ಸ್ಟೋರ್ಗೆ ವಸ್ತುಗಳನ್ನು ಖರೀದಿಸಲು ಹೋದ ಶ್ರವಣ್ ಕುಮಾರ್ ಅವರು, ಅಂಗಡಿ ಮಾಲಿಕ ನವೀನ್ ಅವರ ಮೇಲೆ ಸಂಜನ್ ರೈ, ಪ್ರವೀಶ್ ನಾಯರ್, ರೇವಂತ್ ಮತ್ತು ವಿನೀತ್ ಅವರು ಹಲ್ಲೆ ಮಾಡುತ್ತಿರುವುದನ್ನು ಕಂಡು “ಏಕೆ ಅವರನ್ನು ಹೊಡೆಯುತ್ತಿದ್ದೀರಾ?” ಎಂದು ವಿಚಾರಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಶ್ರವಣ್ ಕುಮಾರ್ ಅವರಿಗೆ ಸಂಜನ್ ರೈ ಎಂಬಾತ ಅವಾಚ್ಯವಾಗಿ ದೂಷಿಸಿ, ಕೈಯಿಂದ ಎದೆಗೆ ಹೊಡೆದು ಖಾಲಿ ಸೋಡಾ ಬಾಟಲಿಯಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ಆ ಹೊಡೆತಕ್ಕೆ ಗಾಯಗೊಂಡ ಶ್ರವಣ್ ಕುಮಾರ್ ಅವರ ಮೇಲೆ ಆರೋಪಿಗಳು ಕೈಯಿಂದ, ಕಾಲಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.



