ಬಂಟ್ವಾಳ: ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಮತ್ತು ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ ಕೊಯಿಲ ಹನುಮಾನ್ ನಗರದಲ್ಲಿ 23ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ .2 ರಂದು ಸಮಾಪನಗೊಂಡಿತು.

ಈ ಸಂದರ್ಭದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಬಜರಂಗದಳ ದಕ್ಷಿಣ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಂಸತಡ್ಕ ಅವರು ಮಾತನಾಡಿ ಆಧ್ಯಾತ್ಮಿಕ ಹಿನ್ನೆಲೆ ಹೊಂದಿರುವ ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಮತಾಂಧ ಶಕ್ತಿಗಳು ಮತ್ತು ಧರ್ಮದ ಹೆಸರಿನಲ್ಲಿ ನಡೆಸುತ್ತಿರುವ ನಿರಂತರ ದಾಳಿ ಎದುರಿಸುವಲ್ಲಿ ಇಲ್ಲಿನ ಮಣ್ಣಿನ ಸತ್ವ ಮತ್ತು ಧಾರ್ಮಿಕ ಶಕ್ತಿ ಸಹಕಾರಿಯಾಗಿದೆ. ಇದಕ್ಕಾಗಿ ದೇಶದ ಆಂತರಿಕ ಮತ್ತು ಬಾಹ್ಯ ದುಷ್ಟ ಶಕ್ತಿಗಳನ್ನು ಎದರಿಸಲು ಧರ್ಮ ಜಾಗೃತಿ ಅಗತ್ಯವಾಗಿದ್ದು, ಆ ಮೂಲಕ ‘ಸಿಂಧೂರ’ ಗೆಲುವು ಸಾಧಿಸಿದ ಸೈನಿಕರಿಗೂ ಬೆಂಬಲ ನೀಡಿದಂತಾಗುತ್ತದೆ ಎಂದರು.

ಅರಳ ಶ್ರೀ ಗರುಡ ಮಹಾಕಾಳಿ ದೇವಳದ ಟ್ರಸ್ಟಿ ಜಗದೀಶ ಆಳ್ವ ಅಗ್ಗೊಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಆಚರಣೆಗೆ ಜಾತಿ ಅಡ್ಡಿಯಾಗಕೂಡದು’ ಎಂದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಉಮಾಶಂಕರ್ ಬೆಂಗಳೂರು, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್, ಮುಖಂಡರಾದ ಸಂದೇಶ ಶೆಟ್ಟಿ ಅರೆಬೆಟ್ಟು, ಸುದರ್ಶನ್ ಬಜ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ರೋಹಿತಾಶ್ವ ಭಂಗ, ಸಿದ್ಧಕಟ್ಟೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಕಾಡಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಪ್ರಮೋದ್ ಕುಮಾರ್ ರೈ ಕಾಡಬೆಟ್ಟು ಶುಭ ಹಾರೈಸಿದರು.

ಸೈನಿಕ ಸಂದೀಪ್ ಶೆಟ್ಟಿ, ಉದ್ಯಮಿ ಎಂ.ಸಿ.ಶೆಟ್ಟಿ ಮಂಗಳೂರು, ಪತ್ರಕರ್ತ ಸುಖಪಾಲ್ ಪೊಳಲಿ, ರಾಯಿ ಗ್ರಾ,ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಬೆಟ್ಟು, ಶಾರದೋತ್ಸವ ಸಮಿತಿ ಅಧ್ಯಕ್ಷ ದಿನೇಶ ಶೆಟ್ಟಿ ಮಡಂದೂರು, ಮಹಿಳಾ ಸಮಿತಿ ಅಧ್ಯಕ್ಷೆ ಸುನೀತ ಸತೀಶ ಕೊಯಿಲ, ಟ್ರಸ್ಟಿ ಗೀತಾ ಸುಭಾಶ್ ಶೆಟ್ಟಿ, ವಸಂತ ಕುಮಾರ್ ಅಣ್ಣಳಿಕೆ, ಶರತ್ ಕುಮಾರ್ ಕೊಯಿಲ, ರಾಜೇಶ ಅಂಚನ್, ಉಮೇಶ ಡಿ.ಎಂ., ಚಂದ್ರಶೇಖರ ಗೌಡ, ರಾಘವ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.

ಡೊಂಬಯ ಅರಳ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ವಂದಿಸಿದರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.


